ಬಡವರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಬೇಕು: ಮಾಜಿ ಸಚಿವ ಬಸವರಾಜ ಬೊಮ್ಮಾಯಿ

Update: 2019-05-05 16:25 GMT

ಹುಬ್ಬಳ್ಳಿ, ಮೇ 5: ನಮಗೆ ಅಳುವ ಸಿಎಂ ಬೇಡ. ಬಡವರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಬೇಕು. ನಮ್ಮಲ್ಲಿ ಜನ ಶಕ್ತಿ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಹಣದ ಶಕ್ತಿ. ಈ ಸಂಘರ್ಷದಲ್ಲಿ ಜನ ಶಕ್ತಿ ಗೆದ್ದ ಇತಿಹಾಸವಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಉಪಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಕುಂದಗೋಳದ ಶಿವಾನಂದ ಮಠದ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಅಳುಬುರುಕ ಮುಖ್ಯಮಂತ್ರಿಯನ್ನ ತೆಗೆಯಬೇಕು. ಸಾಲಮನ್ನಾ ವಾಗ್ದಾನ ನೀಡಿ ಇದೂವರೆಗೂ ರೈತರ ಸಾಲಮನ್ನಾ ಮಾಡಿಲ್ಲ. ಹೀಗಾಗಿ ಈ ಸರಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲಾಗಲಿಲ್ಲ. ಆದರೆ, ಕುಂದಗೋಳದಲ್ಲಿ ಮುಂದಿನ ಸಿಎಂ ಆಗುತ್ತೇನೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು ಎಂದು ಬೊಮ್ಮಾಯಿ ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

120 ಸ್ಥಾನ ಗಳಿಸಿದ್ದ ಕಾಂಗ್ರೆಸ್ 78 ಸ್ಥಾನಕ್ಕೆ ಇಳಿದಿದೆ. ಉಪ ಚುನಾವಣೆಯ ಬಳಿಕ 76 ಸ್ಥಾನಕ್ಕೆ ಇಳಿಯಲಿದೆ. ಸಿದ್ದರಾಮಯ್ಯ ಎಲ್ಲರನ್ನು ಏಕವಚನದಲ್ಲೇ ಟೀಕೆ ಮಾಡುತ್ತಾರೆ. ಹಿರಿಯರಿಗೆ ಗೌರವ ನೀಡುವ ಕನಿಷ್ಟ ಸೌಜನ್ಯವೂ ಇಲ್ಲ. ಇಂತಹವರಿಗೆ ಇಲ್ಲಿ ಸ್ಥಾನವೂ ಇಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಕುಂದಗೋಳ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆಂದು ಜನತೆಗೆ ಉತ್ತರ ನೀಡಬೇಕು. ಡಿ.ಕೆ.ಶಿವಕುಮಾರ್ ಅವರಿಗೆ ಕುಂದುಗೋಳ ಹೊಡೆತ ಗೊತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ ಹೇಳಿರುವುದು ಮೂರ್ಖತನ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿನ ಜನ ವಿರೋಧಿ ಭ್ರಷ್ಟ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಕಿತ್ತೊಗೆದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಕುಂದುಗೋಳ ಕ್ಷೇತ್ರದ ಜನರಿಗೆ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News