ನಿರೀಕ್ಷಿತ ಪ್ರಮಾಣದಲ್ಲಿ ಆಗದ ಪೂರ್ವ ಮುಂಗಾರು: ತಗ್ಗದ ಬಿಸಿಲಿನ ತಾಪ, ಜನತೆ ಕಂಗಾಲು
ಚಾಮರಾಜನಗರ, ಮೇ 11: ಪೂರ್ವ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದ ಪರಿಣಾಮ ಜಿಲ್ಲೆಯಲ್ಲಿ ಬಿಸಿಲ ತಾಪ ತಗ್ಗದೇ ಜನತೆ ಪರದಾಡುವಂತಾಗಿದೆ. ಈ ವೇಳೆಗೆ ಜಿಲ್ಲೆಯಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ ಬಿದ್ದಿಲ್ಲ. ಹೀಗಾಗಿ ವಾತಾವರಣದಲ್ಲಿನ ಉಷ್ಣಾಂಶವೂ ಅಷ್ಟಾಗಿ ಕಡಿಮೆಯಾಗಿಲ್ಲ. ಇದರಿಂದಾಗಿ ಬೆಳಗ್ಗೆ 11 ರಿಂದ ಸಂಜೆ 5ರವರೆಗೂ ತಾಪ ತಟ್ಟುತ್ತಲೇ ಇದ್ದು, ಬಿಸಿಲಷ್ಟೇ ಅಲ್ಲ, ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಶ್ರಮಿಕ ಜೀವಿಗಳು, ಅದರಲ್ಲೂ ಕಾರ್ಮಿಕರನ್ನು ಪರಿತಪಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಮಾರ್ಚ್ ಎರಡನೇ ವಾರದಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿತ್ತು. ಈಗಲೂ ಸಹ 35.5 ಡಿಗ್ರಿಯಿಂದ 36 ಡಿಗ್ರಿ ಸೆಲ್ಸಿಯಸ್ವರೆಗೂ ತಾಪಮಾನವಿದ್ದು, ಜನತೆಯನ್ನು ಹೈರಾಣು ಮಾಡಿದೆ. ನೆರಳು ಸಿಕ್ಕರೆ ಸಾಕಪ್ಪಾ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಮಹದೇಶ್ವರ ಬೆಟ್ಟ, ಹೊಗೇನೆಕಲ್ ಭಾಗದಲ್ಲಿ ಬಿಸಿಲು ಹೆಚ್ಚು ತಟ್ಟುತ್ತಿದೆ.
ಬಿಸಿಲಿನಿಂದಾಗಿ ಬೆಳಗ್ಗೆ 11ರ ಬಳಿಕ ಸಂಜೆ 4ರ ವರೆಗೆ ಜನರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ ಇಲ್ಲವೇ ಸಂಜೆ ಬಳಿಕ ಜನರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಹವಾನಿಯಂತ್ರಿತ ಕೊಠಡಿ, ಫ್ಯಾನ್, ಏರ್ ಕೂಲರ್ ಗಳಿಗೆ ಮೊರೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ರಸ್ತೆಗಳಿಂದ ಹೆಚ್ಚು ತಾಪ: ಬಿಸಿಲಿನ ಝಳದೊಂದಿಗೆ ಜಿಲ್ಲಾ ಕೇಂದ್ರ ಸೇರಿದಂತೆ ಕೊಳ್ಳೇಗಾಲ ಇತರೆಡೆ ಸಿಮೆಂಟ್ ರಸ್ತೆಗಳು ಹೆಚ್ಚಾಗಿದ್ದು, ಈ ರಸ್ತೆಗಳಲ್ಲಿ ಚಲಿಸುವ ಮಂದಿಗೆ ಬಿಸಿಲಿನ ತಾಪ ಇನ್ನೂ ಹೆಚ್ಚಾಗಿದೆ. ತಾಪದ ಪರಿಣಾಮ ಜನತೆ ಎಳನೀರು, ಮಜ್ಜಿಗೆ, ತಂಪು ಪಾನೀಯಗಳು, ಕಲ್ಲಂಗಡಿ ಹಣ್ಣು ಸೇವನೆ ಮಾಡುವ ಮೂಲಕ ದೇಹವನ್ನು ಹಿತಗೊಳಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಆ ತಂಪು ಆಹಾರ ಪದಾರ್ಥಗಳ ಬೆಲೆಯೂ ತುಸು ಹೆಚ್ಚಾಗಿದೆ.
ಎಳನೀರಿಗೆ ಬಲು ಬೇಡಿಕೆ: ಜಿಲ್ಲೆಯಲ್ಲಿ ಎಳನೀರು 25 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ. ಕಲ್ಲಂಗಡಿಗೂ ಅಷ್ಟೇ ಬೇಡಿಕೆ ಇದೆ.
ಜಿಲ್ಲೆಯಲ್ಲಿ ಮಳೆ ಪ್ರಮಾಣ: ಜಿಲ್ಲೆಯಲ್ಲಿ ತಾಪಮಾನ ತಗ್ಗದಿರಲು ವಾಡಿಕೆಯಷ್ಟು ಮಳೆಯಾಗದಿರುವುದೇ ಕಾರಣ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆಯಂತೆ 129 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಸದ್ಯ ಬಿದ್ದಿರುವ ಮಳೆ 92 ಮಿ.ಮೀ. ಮಾತ್ರ. ಇನ್ನು ಎಪ್ರಿಲ್ ತಿಂಗಳಲ್ಲಿ 67 ಮಿ.ಮೀ. ವಾಡಿಕೆ ಮಳೆಗೆ ಆಗಿರುವುದು 57 ಮಿ.ಮೀ. ಮಾತ್ರ. ಮೇ ತಿಂಗಳಲ್ಲಿ ಈವರೆಗೆ ವಾಡಿಕೆಯಂತೆ 40 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಆಗಿರುವುದು ಕೇವಲ 22 ಮಿ.ಮೀ. ಒಟ್ಟಾರೆ ತಿಂಗಳವಾರು ಸಹ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿಲ್ಲ ಎಂಬುದು ಗಮನಾರ್ಹ.
ಬಿಸಿಲಿಂದ ರಕ್ಷಿಸಿಕೊಳ್ಳಲು ಛತ್ರಿಗಳು ಹೆಚ್ಚಾಗಿ ಹೊರ ಬರುತ್ತಿವೆ. ಹೆಣ್ಣು ಮಕ್ಕಳು ಹೆಚ್ಚಾಗಿ ಛತ್ರಿಗಳನ್ನು ಬಳಸುತ್ತಿದ್ದಾರೆ. ಇನ್ನು ಚರ್ಮಕಾಂತಿಯನ್ನು ಬಿಸಿಲಿಂದ ರಕ್ಷಿಸಿಕೊಳ್ಳಲು ಸಾಕಷ್ಟು ಮಂದಿ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವ ವಿಧಾನಕ್ಕೆ ಮೊರೆ ಹೋಗುತ್ತಿದ್ದಾರೆ.