ಗೃಹಿಣಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ

Update: 2019-05-14 12:14 GMT

ಹಾಸನ, ಮೇ 13: ಪ್ರೀತಿಸಿ ಮದುವೆಯಾದ ಮಹಿಳೆಯೋರ್ವರು ವರದಕ್ಷಿಣೆ ಕಿರುಕುಳ ತಾಳಲಾರದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ನಗರದ ಜಯನಗರದಲ್ಲಿ ವಾಸವಾಗಿರುವ ಎಂ.ಕೆ.ಅಶ್ವಿನಿ (25) ಎಂಬುವರೇ ರವಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಮೂರುವರೆ ವರ್ಷಗಳ ಹಿಂದೆ ನಗರದ ಜಯನಗರದಲ್ಲಿ ವಾಸವಾಗಿರುವ ಇಂಜಿನಿಯರ್ ಅಶ್ವಿನಿ, ಪ್ರಿಡ್ಜ್ ಮೆಕಾನಿಕ್ ನಾಗೇಶ್ ಜೊತೆ ಪ್ರೀತಿಸಿ ಮನೆಯವರ ವಿರೋಧವಿದ್ದರೂ ಲೆಕ್ಕಿಸದೆ ಮದುವೆಯಾಗಿದ್ದರು. ಮದುವೆಯಾದ ನಂತರ ನಾಗೇಶ್‍ನ ಹಣದ ದಾಹಕ್ಕೆ ರೋಸಿ ಹೋಗಿದ್ದ ಅಶ್ವಿನಿ ಹಲವು ಭಾರಿ ಈ ಬಗ್ಗೆ ತನ್ನ ಪೋಷಕರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ಹೀಗಾಗಿ ಮಗಳ ಮನೆಗೆ ತಂದೆ-ತಾಯಿ ಬಂದು ತಿಳುವಳಿಕೆ ಹೇಳಿ ಹೋಗಿದ್ದರು. ಆದರೂ ಮತ್ತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ನಿನ್ನೆ ರಾತ್ರಿ ಅಶ್ವಿನಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಮೃತ ಅಶ್ವಿನಿ ಅವರ ತಂದೆ ಕೃಷ್ಣಕುಮಾರ್, ತಮ್ಮ ಮಗಳ ಸಾವಿಗೆ ಗಂಡ ನಾಗೇಶ್ ಹಾಗೂ ಆತನ ಪೋಷಕರೇ ಕಾರಣವೆಂದು ದೂರಿದ್ದಾರೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆಂದು ಆರೋಪಿಸಿದ್ದಾರೆ. ದೂರು ದಾಖಲಿಸಿದ ಪೊಲೀಸರು ಆರೋಪಿ ನಾಗೇಶ್‍ನನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ.

ಮಹಿಳಾ ಆರಕ್ಷಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News