ರಾಯಚೂರಿನಲ್ಲಿ ಭೀಕರ ಬರಗಾಲ: ಕೂಲಿ ಅರಸಿ ಗುಳೆ ಹೊರಟ ನೂರಾರು ಗ್ರಾಮಸ್ಥರು
Update: 2019-05-20 14:14 GMT
ರಾಯಚೂರು, ಮೇ 20: ರಾಯಚೂರು ಜಿಲ್ಲೆಯ ನೂರಾರು ಗ್ರಾಮಸ್ಥರು ಕೂಲಿ ಅರಸಿ ಬೆಂಗಳೂರಿಗೆ ಗುಳೆ ಹೊರಟಿದ್ದು, ತೆರಳಲು ರಾತ್ರಿ ಬಸ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿತ್ತು.
ಹೌದು, ಒಂದೆಡೆ ಭೀಕರ ಬರಗಾಲ, ಇನ್ನೊಂದೆಡೆ ಎಡದಂಡೆ ಕಾಲುವೆಯ ನೀರು ಹರಿಯುತ್ತಿಲ್ಲ. ಹೀಗಾಗಿ ಬೇಸತ್ತಿರುವ ಜನ ತುತ್ತು ಕೂಳಿಗಾಗಿ ಕೂಲಿ ಅರಸಿ ಪಟ್ಟಣದೆಡೆಗೆ ಮುಖ ಮಾಡಿದ್ದಾರೆ. ಇನ್ನು ರಾತ್ರಿ ರಾಯಚೂರು, ಸಿಂಧನೂರು ನಗರದ ಕೇಂದ್ರೀಯ ನಿಲ್ದಾಣದಲ್ಲಿ ಹಲವಾರು ಗ್ರಾಮಸ್ಥರು ಬಸ್ಗಾಗಿ ಕಾದು ಕಾದು ಬೇಸತ್ತಿದ್ದರು. ಬರುತ್ತಿದ್ದ ಕೆಲವೇ ಬಸ್ಗಳನ್ನು ಹತ್ತಲು ಜನರು ಮುಗಿಬೀಳುವ ಪರಿಸ್ಥಿತಿ ಇತ್ತು.
ಇನ್ನು ಈ ಬಗ್ಗೆ ಗ್ರಾಮಸ್ಥರನ್ನು ಕೇಳಿದಾಗ, ಬರಗಾಲದ ಬಾಯಿಗೆ ತುತ್ತಾಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ ಗುಳೆ ಹೊರಟಿದ್ದೇವೆ ಎನ್ನುತ್ತಾರೆ.