ಚುನಾವಣೋತ್ತರ ಸಮೀಕ್ಷೆ ಮೂಲಕ ಸಣ್ಣಪುಟ್ಟ ಪಕ್ಷಗಳನ್ನು ಸೆಳೆಯಲು ಮೋದಿ ಕುತಂತ್ರ: ಸಿಎಂ ಕುಮಾರಸ್ವಾಮಿ

Update: 2019-05-20 14:57 GMT

ಬೆಂಗಳೂರು, ಮೇ 20: ‘ತಮ್ಮ ಪರವಾದ ವಾತಾವರಣವಿದೆ ಎಂಬ ಸುಳ್ಳು ಅಲೆ ಸೃಷ್ಟಿಸಲು ಚುನಾವಣೋತ್ತರ ಸಮೀಕ್ಷೆಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಇವು ಎಕ್ಸಿಟ್ ಪೋಲ್‌ಗಳೇ(ಮತಗಟ್ಟೆ ಸಮೀಕ್ಷೆಗಳು) ಹೊರತು, ಎಕ್ಸಾಕ್ಟ್(ನಿಖರ) ಪೋಲ್‌ಗಳಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.

‘ಕೇಂದ್ರದಲ್ಲಿ ಸರಕಾರ ರಚಿಸಲು ಎದುರಾಗಬಹುದಾದ ಸ್ಥಾನಗಳ ಕೊರತೆಗಳನ್ನು ಸಣ್ಣ-ಪುಟ್ಟ ಪಕ್ಷಗಳನ್ನು ತನ್ನತ್ತ ಸೆಳೆಯುವ ಮೂಲಕ ತುಂಬಿಸಿಕೊಳ್ಳಲು ಪ್ರಧಾನಿ ಮೋದಿ ಚುನಾವಣೋತ್ತರ ಸಮೀಕ್ಷೆಗಳೆಂಬ ತಂತ್ರ ಹೆಣೆದಿದ್ದಾರೆ’ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

‘ಮೋದಿ ಆಡಳಿತದಲ್ಲಿ ಮತಯಂತ್ರಗಳ ಅಕ್ರಮದ ಬಗ್ಗೆ ಬಹುತೇಕ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿರುವ ವಿಪಕ್ಷಗಳು, ಚುನಾವಣೆ ಆಕ್ರಮ ತಡೆಯುವ ಸಲುವಾಗಿ ಸಾಂಪ್ರದಾಯಿಕ ಮತಪತ್ರಗಳನ್ನೇ ಜಾರಿಗೆ ತರುವಂತೆ ಮನವಿ ಮಾಡಿವೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಜಗತ್ತಿನಾದ್ಯಂತ ಈಗಲೂ ಮತ ಪತ್ರಗಳ ಮೂಲಕವೇ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಂದುವರಿದ ದೇಶಗಳು ಇನ್ನೂ ಮತಪತ್ರ ವ್ಯವಸ್ಥೆಯನ್ನೇ ಹೊಂದಿವೆ. ಮೇ 19ರಂದು ಪ್ರಕಟವಾದ ಚುನಾವಣೆ ಮತಗಟ್ಟೆ ಸಮೀಕ್ಷೆಯೂ ಮತಯಂತ್ರಗಳ ಅಕ್ರಮದ ಬಗ್ಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ ಎಂದು ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಈ ಸಮೀಕ್ಷೆಗಳನ್ನು ಮೋದಿ ಅವರೇ ಮಾಡಿಸಿದ್ದಾರೆ. ಈ ರೀತಿಯ ತಂತ್ರಗಳ ಮೂಲಕ ಸಣ್ಣ-ಪುಟ್ಟ ಪಕ್ಷಗಳನ್ನು ತಮ್ಮತ್ತ ಸೆಳೆದು ಕೊರತೆ ತುಂಬಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಮತಯಂತ್ರ ಅಕ್ರಮ, ಸಮೀಕ್ಷೆ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News