ಕೋಳಿ ಹುಟ್ಟುವ ಮೊದಲೇ ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ: ದಿನೇಶ್ ಗುಂಡೂರಾವ್

Update: 2019-05-21 12:56 GMT

ಬೆಂಗಳೂರು, ಮೇ 21: ಕೋಳಿನೇ ಹುಟ್ಟದೇ, ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ರೋಷನ್ ಬೇಗ್ ಮಾತಿಗೆ ವ್ಯಂಗವಾಗಿ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ಕೋಳಿನೇ ಹುಟ್ಟದೇ, ರೋಷನ್ ಬೇಗ್ ಕಬಾಬ್ ಮಾಡಲು ಹೊರಟಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಬಗ್ಗೆಯೇ ಇಷ್ಟೊಂದು ಆತುರ ಪಡುತ್ತಿರುವುದು ಏಕೆ? ಮೇ 23ರಂದು ಪ್ರಕಟವಾಗುವ ಫಲಿತಾಂಶ ಎಲ್ಲದಕ್ಕೂ ಉತ್ತರ ಕೊಡುತ್ತದೆ. ತಪ್ಪು ಮಾಡಿದವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್‌ ಅಹ್ಮದ್‌ ಖಾನ್, ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದಾಗ ಎಲ್ಲವೂ ಸರಿಯಾಗಿತ್ತು. ಇವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿಲ್ಲ ಎಂದ ಮಾತ್ರಕ್ಕೆ ಕಾಂಗ್ರೆಸ್ ಸರಿಯಿಲ್ಲವೇ? ಚುನಾವಣೋತ್ತರ ಸಮೀಕ್ಷೆ ನೋಡಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ರೋಷನ್ ಬೇಗ್ ರಾಜಕೀಯವಾಗಿ ಬೇರೆ ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಬೇರೆ ಪಕ್ಷಕ್ಕೆ ಹೋಗುವುದಾದರೆ ಹೋಗಲಿ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News