ಸಮೀಕ್ಷೆಗಳ ಮೇಲೆ ನಮಗೆ ನಂಬಿಕೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2019-05-21 15:03 GMT

ಕಲಬುರಗಿ, ಮೇ 21: ಲೋಕಸಭೆ ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನಮಗೆ ಯಾವುದೇ ರೀತಿಯ ನಂಬಿಕೆ ಇಲ್ಲ. ಸಮೀಕ್ಷೆಯಂತೆಯೆ ಫಲಿತಾಂಶ ಬಂದರೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಮೇಲೆ ಸಂಶಯ ವ್ಯಕ್ತಪಡಿಸಬೇಕಾಗುತ್ತದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಲವು ಸಂಸ್ಥೆಗಳು ತಮ್ಮ ತಮ್ಮ ಮಾಹಿತಿ, ಮೂಲಗಳನ್ನು ಆಧರಿಸಿ ಮತಗಟ್ಟೆ ಸಮೀಕ್ಷೆ ಪ್ರಕಟಿಸಿವೆ. ಆದರೆ, ನಮ್ಮ ಕಾರ್ಯಕರ್ತರು, ಮುಖಂಡರು, ತಳಮಟ್ಟದಲ್ಲಿ ಕೆಲಸ ಮಾಡಿರುವವರು ಬೇರೆಯದ್ದೆ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಿದರು.

ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವಂತೆ ರಾಜ್ಯದಲ್ಲಿ ಅಷ್ಟು ಕಡಿಮೆ ಸ್ಥಾನ ನಮಗೆ ಯಾವತ್ತೂ ಸಿಕ್ಕಿಲ್ಲ. ಎಕ್ಸಿಟ್ ಪೋಲ್ ಎಕ್ಸಾಸರೇಟೆಡ್ ಆಗಿದೆ. ಕಲಬುರಗಿ ಕ್ಷೇತ್ರ ಸೇರಿದಂತೆ ಎಲ್ಲ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಎಂದು ಖರ್ಗೆ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಗೋಲ್‌ಮಾಲ್: ಚುನಾವಣೆ ಘೋಷಣೆಯಾದ ದಿನದಿಂದ ಪ್ರಧಾನಿ ಮೋದಿ ದೇಶದಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ದಾಟುವುದಿಲ್ಲ ಎಂದು ಹೇಳಿಕೊಂಡೇ ಬಂದಿದ್ದಾರೆ. ಯಾವ ಆಧಾರದ ಮೇಲೆ ಅವರು ಈ ಹೇಳಿಕೆ ನೀಡುತ್ತಿದ್ದಾರೆಂದು ಗೊತ್ತಿಲ್ಲ. ಸೋಲು-ಗೆಲುವು ಬೇರೆ ವಿಚಾರ. ಆದರೆ, ಈ ರೀತಿಯ ಹೇಳಿಕೆಯ ಹಿಂದೆ ಏನೋ ಮೋಸ ಅಡಗಿದೆ ಎಂದು ಆರೋಪಿಸಿದರು.

ಮೋದಿಗೆ ಅನುಕೂಲ: ಪ್ರಧಾನಿ ಮೋದಿ ಪ್ರಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಸಲಾಗಿದೆ. ಇಷ್ಟು ಸುದೀರ್ಘವಾಗಿ ಚುನಾವಣೆ ನಡೆಸುವ ಅಗತ್ಯ ಇರಲಿಲ್ಲ. ಹಿಂದೆ ಒಂದು-ಎರಡು ದಿನದಲ್ಲಿ ಚುನಾವಣೆ ಮುಗಿಸಿದ ನಿದರ್ಶನಗಳು ಇವೆ ಎಂದು ತಿಳಿಸಿದರು.

ಕೊನೆಯ ಹಂತದ ಮತದಾನ ನಡೆಯುತ್ತಿರುವ ವೇಳೆ ಮೋದಿ ಬದರಿನಾಥ್ ದೇವಸ್ಥಾನಕ್ಕೆ ತೆರಳಿದ್ದಾರೆ. ಕೈಯಲ್ಲಿ ಕೋಲು ಹಿಡಿದು, ಶಾಲು ಹೊದ್ದು ನಾಟಕ ಮಾಡಿದ್ದಾರೆ. ಛಾಯಾಗ್ರಾಹಕರಿಗೆ ತಾವೆ ನಿರ್ದೇಶನ ಮಾಡಿದ್ದಾರೆ. ಅದು ಹೃದಯದಿಂದ ಬಂದ ಅಧ್ಯಾತ್ಮ ಭಾವನೆಯಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು

ಮೋದಿ ಮತ್ತು ಅಮಿತ್ ಶಾ ಅನೇಕ ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಆದರೆ, ಅವರ ಮೇಲೆ ಚುನಾವಣಾ ಆಯೋಗ ಕ್ರಮ ಜರುಗಿಸಿಲ್ಲ. ಚುನಾವಣಾ ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎಂಬಂತೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಆಯೋಗದಲ್ಲಿರುವವರೇ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಕಲಬುರಗಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಿದವರನ್ನು ಸೋಲಿಸುತ್ತಾರೆಂದರೆ ಹೇಗೆ. ಸೋಲಲು ಕಾರಣ ಬೇಕಲ್ಲ. ಕಾರಣ ಇಲ್ಲದೆ ಸೋಲಿಸುತ್ತಾರೆಂದರೆ ಏನರ್ಥ. ನಮ್ಮ ಭವಿಷ್ಯ ಈಗ ಇವಿಎಂಗಳಲ್ಲಿ ಭದ್ರವಾಗಿದೆ. ಮೇ 23ಕ್ಕೆ ಫಲಿತಾಂಶ ಗೊತ್ತಾಗಲಿದೆ ಎಂದು ತಿಳಿಸಿದರು.

ಆಪಾದನೆ ಸರಿಯಲ್ಲ

‘ಕಾಂಗ್ರೆಸ್ ನಾಯಕರ ಬಗ್ಗೆ ಮಾಜಿ ಸಚಿವ ರೋಷನ್ ಬೇಗ್ ಮಾಡಿರುವ ಆಪಾದನೆ ಸಲ್ಲ, ಈ ರೀತಿ ಮಾಡುತ್ತಿರುವುದರಿಂದಲೇ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಹೀಗೆಯೆ ಮುಂದುವರಿದರೆ ದೇಶದಲ್ಲಿ ಪಕ್ಷಕ್ಕೆ ಉಳಿಗಾಲ ಇಲ್ಲದಂತಾಗುತ್ತದೆ. ಪಕ್ಷಕ್ಕೆ ಒಂದು ಸಲ ಹಾನಿಯಾದರೆ, ಅದನ್ನು ಸರಿಪಡಿಸಲು ಅನೇಕ ದಿನಗಳು ಬೇಕಾಗುತ್ತವೆ. ಅವರಿಗೆ ಏನಾದರೂ ಸಮಸ್ಯೆಗಳಿದ್ದರೆ ಹೈಕಮಾಂಡ್ ಗಮನಕ್ಕೆ ತರಬಹುದಿತ್ತು. ಮಾಧ್ಯಮಗಳ ಮುಂದೆ ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು’

-ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಕಾಂಗ್ರೆಸ್ ನಾಯಕ

‘ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಈಗ ಸತ್ಯದ ಅರಿವಾಗಿದೆ. ಸಿದ್ದರಾಮಯ್ಯ ಅವರದ್ದು ಫ್ಲಾಪ್ ಶೋ ಎಂದು ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ, ಅಂತಿಮ ಕಾಲದಲ್ಲಿ ಬೇಗ್ ಅವರಿಗೆ ಸತ್ಯದ ಅರಿವಾಗಿದೆ. ಹೀಗಾಗಿ ಬೇಗ್ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಕಡೆಗಾಲದಲ್ಲಾದರೂ ಸತ್ಯದ ಅರಿವಾಯಿತಲ್ಲ’

-ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News