ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟ: ಮಂಡ್ಯ ಡಿಸಿ ಡಾ.ಪಿ.ಸಿ.ಜಾಫರ್
Update: 2019-05-21 17:13 GMT
ಮಂಡ್ಯ, ಮೇ 21: ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ಮೇ 23 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತ ಎಣಿಕೆಯ ಸಿದ್ದತೆಯನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ಪಿ.ಸಿ.ಜಾಫರ್ ಹಾಗೂ ಎಸ್ಪಿ ಶಿವಪ್ರಕಾಶ್ ದೇವರಾಜ್ ಮಂಗಳವಾರ ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಜಾಫರ್, ಮತ ಎಣಿಕೆ ಕಾರ್ಯದ ಸಿದ್ಧತೆ ಪರಿಶೀಲನೆ ಮತ್ತು ಟ್ರಯಲ್ ರನ್ ಮಾಡಿದ್ದೇವೆ. ಫಲಿತಾಂಶ ಯಾವ ರೀತಿ ಕೊಡಬೇಕು. ಸಾಫ್ಟ್ ವೇರ್ ಕಾರ್ಯ ನಿರ್ವಹಣೆ ಬಗ್ಗೆಯೂ ಪರಿಶೀಲನೆ ಮಾಡಿದ್ದೇವೆ ಎಂದರು.
ಬೆಳಗ್ಗೆ 8ಗಂಟೆಗೆ ಎಣಿಕೆ ಕಾರ್ಯ ಆರಂಭವಾಗಲಿದೆ. 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 16 ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸಕಲ ಭದ್ರತಾ ವ್ಯವಸ್ಥೆ ಮಾಡಿದ್ದೇವೆ. ಮಧ್ಯಾಹ್ನದ ವೇಳೆಗೆ ಪೂರ್ಣ ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ತಿಳಿಸಿದರು.
ಮತ ಎಣಿಕೆಗೆ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಜನ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ. ಭದ್ರತೆಗಾಗಿ ಸುಮಾರು 500 ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದರು.