ಡಿ.ಆರ್.ಪಾಟೀಲ್ ಸೋಲು ನಮಗೆ ನೋವು ತರಿಸಿದೆ: ವಿಜೇತ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ

Update: 2019-05-23 19:18 GMT

ಹಾವೇರಿ, ಮೇ 23: ಮಾಜಿ ಶಾಸಕ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಿ.ಆರ್.ಪಾಟೀಲ್ ಹಿರಿಯ ರಾಜಕಾರಣಿ. ಅವರ ಸೋಲು ತಮಗೆ ನೋವು ತರಿಸಿದೆ ಎಂದು ಹಾವೇರಿ ಲೋಕಸಭಾ ವಿಜೇತ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದ್ದಾರೆ.

ಗುರುವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದೇನಿದ್ದರೂ ಕಾಂಗ್ರೆಸ್ ಪಕ್ಷದ ಬಗ್ಗೆ ಆರೋಪವೇ ಹೊರತು ಡಿ.ಆರ್.ಪಾಟೀಲ್ ವಿರುದ್ಧ ಆರೋಪವಲ್ಲ. ಅವರಿಗೆ ನನ್ನ ಜೊತೆ ಚುನಾವಣೆಗೆ ನಿಲ್ಲದಂತೆ ಮೊದಲೇ ಸಲಹೆ ನೀಡಿದ್ದೆ. ನಾವು ನರೇಂದ್ರ ಮೋದಿ ಹೆಸರು ಹೇಳಿ ಮತ ಕೇಳಿದರೆ ಕಾಂಗ್ರೆಸ್ಸಿನವರು ಯಾರ ಹೆಸರನ್ನೂ ಹೇಳಿ ಮತ ಕೇಳಲಿಲ್ಲ. ಹೀಗಾಗಿ, ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನ್ ನಾಯಕರು ಹೆಸರು ಇಲ್ಲದಂತಾಗಿದ್ದಾರೆ ಎಂದು ಸಂಸದ ಶಿವಕುಮಾರ್ ಉದಾಸಿ ಹೇಳಿದರು. ಐದು ವರ್ಷ ನರೇಂದ್ರ ಮೋದಿ ಪ್ರಧಾನಿಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮೋದಿ ಅಲೆ ತಮ್ಮ ಗೆಲುವಿಗೆ ಕಾರಣ ಎಂದರು.

ಇದೇ ವೇಳೆ ಪರಾಜಿತ ಅಭ್ಯರ್ಥಿ ಡಿ.ಆರ್.ಪಾಟೀಲ್ ಆರೋಪಕ್ಕೆ ಉತ್ತರಿಸಿದ ಅವರು, ನಾವು ಭಾವನೆಗಳಿಗೆ ಬೆಲೆ ನೀಡಿದ್ದಕ್ಕೆ ಗೆದ್ದಿದ್ದೇವೆ. ಕಾಂಗ್ರೆಸ್‌ನಲ್ಲಿ ಜನರ ಭಾವನೆಗಳಿಗೆ ಬೆಲೆ ಇಲ್ಲ. ಬಿಜೆಪಿಯ ಗುರಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಲ್ಲ. ಕಾಂಗ್ರೆಸ್ ಸಂಸ್ಕೃತಿ ಮುಕ್ತ ಭಾರತ ಮಾಡುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News