ಕಾರಿಗೆ ಆ್ಯಂಬುಲೆನ್ಸ್ ಢಿಕ್ಕಿ: ಒಂದೇ ಕುಟುಂಬದ ಐವರು ಮೃತ್ಯು

Update: 2019-05-27 11:54 GMT

ಬೆಂಗಳೂರು, ಮೇ 27: ವೇಗವಾಗಿ ಸಾಗುತ್ತಿದ್ದ ಆ್ಯಂಬುಲೆನ್ಸ್ ವಾಹನವೊಂದು ಪಕ್ಕದ ರಸ್ತೆಯ ಕಾರಿಗೆ ಢಿಕ್ಕಿ ಹೊಡೆದಿರುವ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಇಲ್ಲಿನ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ದೀಪಂಕರ್ ಡೇ(45), ಸ್ವಾಗತ್ ಚೌಧರಿ(42), ಸುಜಯ್(42), ಜಯಂತಿ(65), ಧ್ರುವ ಡೇ(14) ಮೃತಪಟ್ಟವರಾಗಿದ್ದು, ಇವರೆಲ್ಲರೂ ಬೆಂಗಳೂರಿನ ಆರ್‌ಟಿ ನಗರದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಏನಿದು ಘಟನೆ?: ದೀಪಂಕರ್ ಡೇ ಅವರ ಪೋಷಕರು ಚೆನ್ನೈನಲ್ಲಿ ವಾಸವಾಗಿದ್ದು, ತಂದೆ ಜಯಥಿ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಮೂರು ದಿನಗಳ ಹಿಂದಷ್ಟೇ ಚೆನ್ನೈನಿಂದ ಬೆಂಗಳೂರಿಗೆ ಬಂದು ಮಗನ ಮನೆಯಲ್ಲಿ ಉಳಿದುಕೊಂಡಿದ್ದರು.

ರವಿವಾರ ಕುಟುಂಬದವರೆಲ್ಲ ಹೊರಗೆ ತೆರಳಿದ್ದು, ವಿವಿಧೆಡೆ ಸುತ್ತಾಡಿ ರಾತ್ರಿ ರೆಸಾರ್ಟ್‌ವೊಂದರಲ್ಲಿ ಊಟ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಯಲಹಂಕದ ಕೋಗಿಲು ಕ್ರಾಸ್ ಬಳಿ ಅತಿವೇಗವಾಗಿ ಮುನ್ನುಗ್ಗಿ ಬಂದ ಆ್ಯಂಬುಲೆನ್ಸ್ ವಾಹನ ರಸ್ತೆ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ಹಾರಿ ಇವರ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಆ್ಯಂಬುಲೆನ್ಸ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ದೇಹಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News