ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 34 ಪ್ರಕರಣ ಇತ್ಯರ್ಥ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2019-05-28 17:38 GMT

ಚಿಕ್ಕಮಗಳೂರು, ಮೇ 28: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಜಿಲ್ಲೆಯಲ್ಲಿ ಜನವರಿ-2019 ರಿಂದ ಮೇ 19 ರವರೆಗೆ 35 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 35 ಪ್ರಕರಣಗಳು ದಾಖಲಾಗಿದ್ದು, 34 ಪ್ರಕರಣಗಳಿಗೆ 15 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ ಎಂದ ಅವರು, ಒಂದು ಪ್ರಕರಣ ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿಯ ತಿಮ್ಮಭೋವಿ ಕ್ಯಾಂಪಿನ ಸುರೇಶ್ ಬಿನ್ ತಿಮ್ಮಭೋವಿ, ಇವರ ಮರಣೋತ್ತರ ಪರೀಕ್ಷೆ ವರದಿ ಬಂದಿಲ್ಲ. ಬಂದ ತಕ್ಷಣ ಪರಿಹಾರ ವಿತರಿಸಲಾಗುವುದು ಎಂದರು.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಲ್ಲೇಶ್ವರ ಗ್ರಾಮದ ಶಿವರಾಜ್ ಎಂಬುವವರಿಗೆ ಟ್ಯಾಕ್ಸಿ ವಿತರಣೆಗಾಗಿ ಕೆನರಾ ಬ್ಯಾಂಕ್‍ನಿಂದ ಸಾಲ ನೀಡುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಗೌತಮ್ ಮಾತನಾಡಿ, ಅರ್ಜಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕಿನಲ್ಲಿ ಸಾಲ ನೀಡುವುದಕ್ಕೆ ಅವುಗಳನ್ನು ಸಂಬಂಧಿಸಿದಂತೆ ಕೆಲವು ಮಾನದಂಡಗಳು ಇರುತ್ತವೆ. ಅವುಗಳ ಸಡಿಲಿಸಲು ಬರುವುದಿಲ್ಲ ಅರ್ಜಿದಾರರಿಗೆ ಕಾರಣ ನೀಡದೇ ಅರ್ಜಿಯನ್ನು ವಾಪಸ್ಸ್ ಕಳುಹಿಸಲು ಆಗುವುದಿಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಇದ್ದರೆ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕೆಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಕ್ರಮ ವಹಿಸಬೇಕೆಂದು ಸಮಿತಿ ಸದಸ್ಯರು ಮನವಿ ಮಾಡಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಒಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದ್ದು, ಮತ್ತೊಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಪ್ರಸ್ತಾವ ಸಲ್ಲಿಸಲು ಬರುವುದಿಲ್ಲ. ಈಗಿರುವ ಭವನಕ್ಕೆ ದುರಸ್ತಿ ಮಾಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ದಲಿತರಿಗೆ ನಿವೇಶನ ಮತ್ತು ದರಖಾಸ್ತಿನಡಿ ಶೇ.40ರಷ್ಟು ಹಾಗೂ ಇತರೆಯವರಿಗೆ ಶೇ.60ರಷ್ಟು ನಿವೇಶನ ನೀಡಬೇಕಿದ್ದು, ಇತರೆಯವರಿಗೆ ಶೇ.60ರಷ್ಟು ಹಕ್ಕು ಪತ್ರಗಳನ್ನು ಈಗಾಗಲೇ ನೀಡಲಾಗಿದೆ. ದಲಿತರಿಗೆ ಮಾತ್ರ ಈವರೆಗೂ ಹಕ್ಕು ಪತ್ರ ನೀಡಿರುವುದಿಲ್ಲ. ದರಖಾಸ್ತಿನ ಸಮಿತಿಯಲ್ಲಿ ಈ ಕುರಿತು ನಿರ್ಣಯವಾಗಿದ್ದರೂ ಸರಕಾರ ಹಂತದಲ್ಲಿ ನಿರ್ಣಯ ವಾಗಬೇಕಾಗಿದೆ ಎಂದು ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಯಾವ ಯಾವ ತಾಲೂಕಿನಲ್ಲಿ ಬಾಕಿ ಉಳಿದಿರುವ ಬಗ್ಗೆ ಪಟ್ಟಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದ ಅವರು ಕಂದಾಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.

ದಲಿತರಿಗೆ ಫಾರಂ 53, 53ಎ ಮತ್ತು 94(ಸಿ)ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿಯನ್ನು ಕೊಡಬೇಕೆಂದು ಸರಕಾರ ನಿರ್ಣಯ ಮಾಡಿದ್ದರೂ ಅಧಿಕಾರಿಗಳು ನೀಡಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸತ್ತಿಹಳ್ಳಿ ಗ್ರಾಮ ಪಂಚಾಯತ್ನ ಮಾಚಗೊಂಡನಹಳ್ಳಿಯಲ್ಲಿ ಎರಡು ಎಕರೆ ಆಶ್ರಯ ನಿವೇಶನಕ್ಕೆ ಜಮೀನು ಕಾಯ್ದಿರಿಸಲು ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಿವೇಶನ ನೀಡಲು ಕಾನೂನಿನ ಅಡಿ ಅವಕಾಶವಿದ್ದು, ಯಾವ ಗ್ರಾಮದಲ್ಲಿ ನಿವೇಶನಕ್ಕೆ ಜಾಗ ಬೇಕೋ ಆ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಗುರುತಿಸಿ ಸರ್ಕಾರಿ ಜಾಗವಿದ್ದಲ್ಲಿ ಕ್ರಮ ವಹಿಸಲಾಗುವುದೆಂದು ಈಗಾಗಲೇ ತಿಳಿಸಿದೆ. ಆಶ್ರಯ ಸಮಿತಿಯಲ್ಲಿ ನಿವೇಶನ ನೀಡಲು ಅವಕಾಶವಿದ್ದು, ಸುಮಾರು 272 ಎಕರೆ ಜಮೀನನ್ನು ಗ್ರಾಮೀಣ ಪ್ರದೇಶದಲ್ಲಿ ಕಾಯ್ದಿರಿಸಲು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಈ ಹಿಂದೆಯೇ ಸೂಚಿಸಲಾಗಿದೆ ಎಂದರು.

ನಿವೇಶನ ರೈತರಿಗೆ ನಿವೇಶನ ಮಂಜೂರಾತಿಗಾಗಿ ಇದುವರೆಗೆ ಯಾವುದೇ ಅರ್ಜಿ ಬಾಕಿ ಇದೆ ಎಂಬ ವಿಷಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ವಿಷಯ ನಿರ್ವಾಹಕ ರಂಗಸ್ವಾಮಿಯವರು ಒಂದು ಅರ್ಜಿ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಚಿಕ್ಕಮಗಳೂರು ವಿಭಾಗದ ಉಪವಿಭಾಗಾಧಿಕಾರಿ ಶಿವಕುಮಾರ್, ನಗರಸಭೆ ಆಯುಕ್ತ ಪರಮೇಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ಸಮಿತಿಯ ಸದಸ್ಯರುಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News