ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿ !

Update: 2019-06-06 12:16 GMT

ಬೆಂಗಳೂರು, ಜೂ. 6: ರಾಜ್ಯದ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಕರಡು ಕಾನೂನು ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರು ವರ್ಗಾವಣೆ ಸಮಯದಲ್ಲಿ ಅನೇಕ ಅನಾನುಕೂಲತೆಗಳನ್ನು ಎದುರಿಸುತ್ತಿದ್ದರು. ಅದನ್ನು ನಿವಾರಿಸಲು ನಿಟ್ಟಿನಲ್ಲಿ ಕೌನ್ಸಲಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರ ಮೂಲಕ ಇಡಿ ರಾಜ್ಯದಲ್ಲಿ ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ಸಮಾನ ಹಂಚಿಕೆಗೆ ಅನುಕೂಲವಾಗುತ್ತದೆ. ವರ್ಗಾವಣೆ ಸಮಯದಲ್ಲಿ ವೃಂದವಾರು ಹಂಚಿಕೆ, ಕನಿಷ್ಠ ಸೇವಾವಧಿಯನ್ನು ಪರಿಗಣಿಸಲಾಗುತ್ತದೆ. ಈ ಸಂಬಂಧ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದರು.

ನಾಲ್ಕನೆ ಶನಿವಾರ ರಜೆ: ಸರಕಾರಿ ರಜೆಗಳ ಪರಿಷ್ಕರಣೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಎರಡನೆ ಶನಿವಾರ ಮತ್ತು ನಾಲ್ಕನೆ ಶನಿವಾರ ರಜೆ ನೀಡಲಾಗುವುದು. ಅಲ್ಲದೆ, ಸರಕಾರಿ ನೌಕರರಿಗೆ ನೀಡಲಾಗುತ್ತಿದ್ದ 15 ಸಾಂದರ್ಭಿಕ ರಜೆಯನ್ನು ಕಡಿತಗೊಳಿಸಿ 10ಕ್ಕೆ ಇಳಿಸಲು ಸಂಪುಟ ತೀರ್ಮಾನಿಸಿದೆ ಎಂದರು. ಇದೇ ವೇಳೆ ಕನಕ ಜಯಂತಿ, ಬಸವ ಜಯಂತಿ ಹಾಗೂ ವಾಲ್ಮೀಕಿ ಜಯಂತಿ ಸೇರಿ ಯಾವುದೇ ಜಯಂತಿ ಅಥವಾ ಹಬ್ಬಗಳ ರಜೆಯನ್ನು ಕಡಿತಗೊಳಿಸದಿರಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದರು.

1998ನೆ ಸಾಲಿನಲ್ಲಿ ಕೆಪಿಎಸ್ಸಿಯಿಂದ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕೃತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾಭದ್ರತೆ ಸಿಗದಿರುವ ಕಾರಣದಿಂದ ಅವರಿಗೆ ಸೇವಾಭದ್ರತೆ ಒದಗಿಸಲು ಕೋರ್ಟ್ ಆದೇಶದಂತೆ ಸುಗ್ರೀವಾಜ್ಞೆ ಹೊರಡಿಸಲು ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈ ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ 1998ರ ನಂತರ ನೇಮಕಗೊಂಡ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಮುಂಭಡ್ತಿ ಅಥವಾ ಅವರ ಹಿತಕ್ಕೆ ಧಕ್ಕೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಒಳಗೊಂಡಂತೆ 104 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಲು ಈ ಹಿಂದೆ 1,280ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿತ್ತು. ಈ ಯೋಜನೆಯ 2ನೆ ಹಂತದಲ್ಲಿ 200ರಿಂದ 250 ಕೆರೆಗಳಿಗೆ ನೀರು ತುಂಬಿಸಲು 455 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಗ್ರಾಮೀಣಾಭಿವೃದ್ದಿ ಇಲಾಖೆಯ ಒಟ್ಟು 18,582 ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಲಾಗಿದ್ದು, ಇದರಲ್ಲಿ 16 ಸಾವಿರ ಕುಡಿಯುವ ನೀರು ಘಟಕಗಳ ನಿರ್ವಹಣಾ ಅವಧಿ ಮುಗಿದಿದೆ. ಇವುಗಳ ಸಮರ್ಪಕ ನಿರ್ವಹಣೆಗೆ ಪ್ರತಿ ತಾಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್‌ನ್ನು ಟೆಂಡರ್ ಮೂಲಕ ಅರ್ಹ ಸಂಸ್ಥೆಗಳಿಗೆ ಒದಗಿಸಲು ಗ್ರಾ.ಪಂ.ಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ.

ಗ್ರಾ.ಪಂ.ಗಳೇ ನಿರ್ವಹಣೆ ಮಾಡಲು ನಿರ್ಧರಿಸಿದಲ್ಲಿ ಅದಕ್ಕೂ ಅವಕಾಶ ನೀಡಲಾಗುತ್ತದೆ. ಒಂದು ತಾಲ್ಲೂಕಿನ 100 ಕ್ಕಿಂತ ಹೆಚ್ಚು ಘಟಕಗಳಿದ್ದಲ್ಲಿ ಹೆಚ್ಚುವರಿ ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಪ್ರಸ್ತುತ ಪ್ರತಿ ಲೀಟರ್‌ಗೆ 10ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಆದರೆ ನಿರ್ವಹಣಾ ವೆಚ್ಚ 25ಪೈಸೆ ಆಗುತ್ತಿದೆ, ಇದನ್ನು ಸರಿದೂಗಿಸಲು ಕಾಲಕಾಲಕ್ಕೆ ಪ್ರತಿ ಲೀ. 25 ಪೈಸೆ ಏರಿಕೆ ಮಾಡಲು ಮತ್ತು 5ವರ್ಷಗಳ ಕಾಲ ನಿರ್ವಹಣೆ ಮತ್ತು ಕಾರ್ಯಾಚರಣೆ ನಿಗದಿಗೊಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ನೀರಿಗೂ ಸ್ಮಾರ್ಟ್‌ಕಾರ್ಡ್: ಗ್ರಾಮೀಣ ಪ್ರದೇಶಗಳಲ್ಲಿನ ನೀರು ಶುದ್ಧೀಕರಣ ಘಟಕಗಳ ಪೈಕಿ ನಾಣ್ಯದ ಬೂತ್ ಇರುವ ಕಡೆ ಇನ್ನು ಮುಂದೆ ನಾಣ್ಯದ ಬದಲಾಗಿ ಸ್ಮಾರ್ಟ್‌ಕಾರ್ಟ್ ಬೂತ್‌ಗಳನ್ನು ಅಳವಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಎಲ್ಲ ಕಾರ್ಯಗಳಿಗಾಗಿ 5 ವರ್ಷಗಳ ಅವಧಿಗೆ 223 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ಕೋರ್ಟ್ ಆದೇಶದ ಮೇರೆಗೆ ಖಾಯಂಗೊಳಿಸಲಾಗಿತ್ತು. ಇವರಿಗೆ ಸೇವಾ ನಿವೃತ್ತಿಯ ನಂತರ ಪಿಂಚಣಿ ನೀಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಡಾ.ಸರೋಜಿನಿ ಮಹಿಷಿ ವರದಿಯನ್ವಯ ರಾಜ್ಯದಲ್ಲಿನ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಸರಕಾರ ಈ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಿ, ಕನ್ನಡಿಗರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಂಪುಟ ಸೂಚಿಸಿದೆ’
-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News