ಕುಡಿಯುವ ನೀರಿನ‌ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಇಲ್ಲವೇ ಕ್ರಮ ಎದುರಿಸಿ- ಪ್ರಿಯಾಂಕ್ ಖರ್ಗೆ ಎಚ್ಚರಿಕೆ

Update: 2019-06-09 06:46 GMT

ಕಲಬುರಗಿ: ಕುಡಿಯುವ ನೀರಿನ ಸಮಸ್ಯೆಗೆ ನೀಗಿಸಲು ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿದ್ದರೂ ಕೂಡಾ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿರುವುದು ಗಮನಕ್ಕೆ ಬಂದಿದ್ದು ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಸಿದರು.

ಗ್ರಾಮೀಣ ಹಾಗೂ ನಗರ ನೀರು ಸರಬರಾಜು ಇಲಾಖೆ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಕುಡಿಯುವ ನೀರಿನ ಯೋಜನೆಗಳ ಕುರಿತು ಕ್ರಿಯಾಯೋಜನೆ ಸಲ್ಲಿಸುವಂತೆ ಹಲವಾರು ಬಾರಿ ಹೇಳಿದರೂ ಕೂಡಾ ಕ್ರಿಯಾ ಯೋಜನೆ ಸಲ್ಲಿಸದೇ  ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಅನುದಾನ ಬಿಡುಗಡೆ ಮಾಡಲು ನಾನು ತಯಾರಿರುವಾಗ ಸಮಸ್ಯೆ ಬಗೆಹರಿಸಲು ನಿಮಗೇನು ಸಮಸ್ಯೆ ? ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು‌.

ನಗರಪಾಲಿಗೆ ವ್ಯಾಪ್ತಿಗೆ 75 ಕೋಟಿ ರೂ., ಗ್ರಾಮೀಣ ಭಾಗಕ್ಕೆ 30 ಕೋಟಿ ರೂ., ಪ್ರತಿಯೊಂದು ಜಿಲ್ಲಾ ಪಂಚಾಯತ್ ಗೆ 50 ಲಕ್ಷ ರೂ. ಹಾಗೂ ತಾಲೂಕು ಪಂಚಾಯತಗೆ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ಕೂಡಾ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.‌ ಪ್ರತಿನಿತ್ಯ ಮಾದ್ಯಮಗಳಲ್ಲಿ ಈ ಕುರಿತು ಸುದ್ದಿಗಳು ಬರುತ್ತಿವೆ ನೀವು ಗಮನಿಸಿಲ್ಲವೇ ? ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

ಕುಡಿಯುವ ನೀರಿಗಾಗಿ ಹಣ ಕೊರತೆಯಿಲ್ಲ ಎಂದ ಸಚಿವರು  ಸಮಸ್ಯಾತ್ಮಕ ಗ್ರಾಮಗಳಿಗೆ ಜಿಪಿ‌ಎಸ್ ಅಳವಡಿಸಲಾಗಿರುವ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು, ಅಗತ್ಯವಿರುವ ಕಡೆ ಬೋರ್ ವೆಲ್ ಕೊರೆಸಿ ಅಥವಾ ಖಾಸಗಿಯವರಿಂದ ನೀರು ಖರೀದಿಸಿ ಕುಡಿಯುವ ನೀರಿನ‌ ಸಮಸ್ಯೆ ಕೂಡಲೇ ಬಗೆಹರಿಸಬೇಕು ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು‌ ಆದೇಶಿಸಿದರು.

ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಉಸ್ತುವಾರಿ ವಹಿಸಿ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಎಂ ವೈ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಹಾಯಕ ಆಯುಕ್ತರಾದ ರಾಹುಲ್ ಪಾಂಡ್ವೆ ಹಾಗೂ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News