ಕೊಟ್ಟಿಗೆಯಲ್ಲಿ ಬೆಂಕಿ ಆಕಸ್ಮಿಕ: ಹೊಗೆಯಿಂದ ಉಸಿರುಗಟ್ಟಿ ರೈತ ಮೃತ್ಯು
ಮಂಡ್ಯ, ಜೂ.14: ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರೈತನೊಬ್ಬ ದಟ್ಟ ಹೊಗೆಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕುಂದೂರು ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಕುಂದೂರು ಗ್ರಾಮದ ರಾಮು(48) ಮೃತಪಟ್ಟಿರುವ ರೈತ.
ಘಟನೆ ವಿವರ: ರೈತರಾಗಿದ್ದ ರಾಮು ತನ್ನ ಹೆಂಚಿನ ಮನೆಯ ಸ್ನಾನದ ಕೊಠಡಿಯಲ್ಲಿ ಒಣ ಹುಲ್ಲನ್ನು ಜಾನುವಾರುಗಳಿಗಾಗಿ ಶೇಖರಿಸಿಟ್ಟಿದ್ದರು. ನಿನ್ನೆ ರಾತ್ರಿ ಜಾನುವಾರುಗಳಿಗೆ ಹುಲ್ಲು ಹಾಕಲು ಹೋದಾಗ ವಿದ್ಯುತ್ ಸಂಪರ್ಕ ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಮು ಸೀಮೆಎಣ್ಣೆ ದೀಪ ಹಚ್ಚಿದಾಗ ಬೆಂಕಿಯು ಆಕಸ್ಮಿಕವಾಗಿ ಒಣಹುಲ್ಲಿಗೆ ತಗುಲಿ ಇಡೀ ಕೊಟ್ಟಿಗೆಯನ್ನು ಆವರಿಸಿದೆ ಎಂದು ಹೇಳಲಾಗಿದೆ. ಬೆಂಕಿಯಿಂದ ಉಂಟಾದ ದಟ್ಟ ಹೊಗೆಗೆ ಸಿಲುಕಿದ ರಾಮು ಅವರಿಗೆ ಕೊಠಡಿಯಿಂದ ಹೊರಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಬೆಂಕಿಯನ್ನು ನಂದಿಸಿದ್ದಾರೆ.