ಜೂನ್ 17ರಂದು ರಾಷ್ಟ್ರವ್ಯಾಪಿ ವೈದ್ಯರ ಪ್ರತಿಭಟನೆಗೆ ಐಎಂಎ ಕರೆ

Update: 2019-06-14 15:47 GMT

ಹೊಸದಿಲ್ಲಿ, ಮೇ 14: ಸೋಮವಾರ ರಾತ್ರಿ ಮೃತಪಟ್ಟ 75 ವರ್ಷದ ರೋಗಿಯ ಕುಟುಂಬಿಕರು ಕಿರಿಯ ವೈದ್ಯರಿಗೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಕೊಲ್ಕತ್ತಾ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ದೇಶದ ವಿವಿಧೆಡೆ ಹಲವು ಸರಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು ಪ್ರತಿಭಟನೆಗೆ ಕೈಜೋಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 4,500 ವೈದ್ಯರು ಶುಕ್ರವಾರ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರ ಸ್ಥಾನಿಕ ವೈದ್ಯರ ಸಂಘಟನೆಗೆ ಸೇರಿದ ವೈದ್ಯರು ರಾಜ್ಯಾದ್ಯಂತೆ ಏಕಕಾಲದಲ್ಲಿ ಎಲ್ಲ 26 ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ತಪಾಸಣೆ ನಡೆಸುವುದನ್ನು ಸ್ಥಗಿತಗೊಳಿಸಿದರು. ಬ್ಯಾನರ್, ಪೋಸ್ಟರ್ ಹಾಗೂ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡ ದೊಡ್ಡ ಸಂಖ್ಯೆಯ ವೈದ್ಯರು ಕೆಇಎಂ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು. ಪುಣೆ, ಔರಂಗಾಬಾದ್ ಹಾಗೂ ನಾಗಪುರದಲ್ಲಿ ಕೂಡ ಇದೇ ರೀತಿಯಲ್ಲಿ ಪ್ರತಿಭಟನೆ ನಡೆಯಿತು.

ದಿಲ್ಲಿಯಲ್ಲಿ ಹಲವು ಸರಕಾರಿ ಆಸ್ಪತ್ರೆಗಳ ವೈದ್ಯರು ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿದರು ಹಾಗೂ ಕರ್ತವ್ಯ ಬಹಿಷ್ಕರಿಸಿದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಹೊರ ರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮುಚ್ಚಿತ್ತು. ಏಮ್ಸ್ ಹಾಗೂ ಸಫ್ದರ್‌ಜಂಗ್ ಆಸ್ಪತ್ರೆಗಳ ಸ್ಥಾನಿಕ ವೈದ್ಯರು ತಲೆಗೆ ಬ್ಯಾಂಡೇಜ್ ಸುತ್ತಿಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೆ, ತುರ್ತು ನಿಗಾ ಘಟಕ ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿದರು.

ಜೈಪುರದ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಯ ಸಂಕೇತವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು. ಕೇರಳದಲ್ಲಿ ಭಾರತೀಯ ವೈದ್ಯಕೀಯ ಸಂಘಕ್ಕೆ ಸೇರಿದ ವೈದ್ಯರು ತಿರುವನಂತಪುರದಲ್ಲಿ ಪ್ರತಿಭಟನೆ ನಡೆಸಿದರು. ಹೈದರಾಬಾದ್‌ನ ನಿಝಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸದಸ್ಯರು ಹೈದರಾಬಾದ್‌ನಲ್ಲಿ ಪ್ರತಿಭಟನ ರ್ಯಾಲಿ ನಡೆಸಿದರು. ಬೆಂಗಳೂರಿನಲ್ಲಿ ಕೂಡ ವೈದ್ಯರು ಪ್ರತಿಭಟನೆ ನಡೆಸಿದರು.

ಜೂನ್ 17ರಂದು ರಾಷ್ಯವ್ಯಾಪಿ ವೈದ್ಯರ ಪ್ರತಿಭಟನೆಗೆ ಐಎಂಎ ಕರೆ

ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ (ಜೂನ್ 17) ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಜೂನ್ 17ರಂದು ಅಗತ್ಯದ ವೈದ್ಯಕೀಯ ಸೇವೆಗಳನ್ನು ಪೂರೈಸಬಾರದು ಹಾಗೂ ಅಹಿಂಸಾ ಪ್ರತಿಭಟನೆ ಮುಂದುವರಿಯಲಿದೆ ಎಂದು ಐಎಂಎ ಹೇಳಿದೆ. ''ವೈದ್ಯರು ಭದ್ರತೆ ಹಾಗೂ ಇತರ ಕೆಲವು ಸಣ್ಣಪುಟ್ಟ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಚಂದ್ರನನ್ನು ನೀಡಬೇಕು ಎಂದು ಹೇಳಿಲ್ಲ'' ಎಂದು ಐಎಂಎ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.

 ಪಶ್ಚಿಮಬಂಗಾಳದಲ್ಲಿ 70ಕ್ಕೂ ಅಧಿಕ ವೈದ್ಯರು ರಾಜೀನಾಮೆ

ವೈದ್ಯರ ಪ್ರತಿಭಟನೆ ಮುಂದುವರಿಯುತ್ತಿರುವ ನಡುವೆ ಪರಿಸ್ಥಿತಿಯನ್ನು ರಾಜ್ಯ ಸರಕಾರ ನಿರ್ವಹಿಸಿದ ರೀತಿ ವಿರೋಧಿಸಿ ಪಶ್ಚಿಮಬಂಗಾಳದಾದ್ಯಂತದ 70ಕ್ಕೂ ಅಧಿಕ ವೈದ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದವರಲ್ಲಿ 69 ವೈದ್ಯರು ಆರ್‌ಜಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರು. ಅಲ್ಲದೆ, ಎನ್‌ಆರ್‌ಎಸ್‌ನ ಇಬ್ಬರು ವೈದ್ಯರು ಹಾಗೂ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ನಾಲ್ವರು ವೈದ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ಕಣಕ್ಕಿಳಿದ ದೀದಿ ಸೋದರ ಸಂಬಂಧಿ, ಮೇಯರ್ ಪುತ್ರಿ

ಪ್ರಸ್ತುತ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ತೃಣಮೂಲ ಕುಟುಂಬದ ಓರ್ವ ಯುವ ವೈದ್ಯ ಹಾಗೂ ಇನ್ನೋರ್ವ ವೈದ್ಯಕೀಯ ವಿದ್ಯಾರ್ಥಿ ಬೆಂಬಲ ಸೂಚಿಸಿದ್ದಾರೆ. ಒಬ್ಬರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ. ಇನ್ನೊಬ್ಬರು ಕೋಲ್ಕತ್ತಾ ಮೇಯರ್ ಹಾಗೂ ನಗರಾಭಿವೃದ್ಧಿ ಸಚಿವ ಪಿರ್ಹಾದ್ ಹಕೀಮ್ ಅವರ ಪುತ್ರಿ. ಮಮತಾ ಅವರ ಸೋದರ ಕಾರ್ತಿಕ್ ಅವರ ಪುತ್ರ ಅಬೇಶ್. ಕೆಪಿಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವ ಅಬೇಶ್ ಕಿರಿಯ ವೈದ್ಯರ ಪ್ರತಿಭಟನ ರ್ಯಾಲಿಯ ನೇತೃತ್ವ ವಹಿಸಿದ್ದರು.

ಪ್ರತಿಭಟನೆ ಹಿಂದೆಗೆಯುವಂತೆ ಬಂಗಾಳ ಶಿಕ್ಷಣ ಸಚಿವರ ಆಗ್ರಹ ತಪ್ಪು ಗ್ರಹಿಕೆಯನ್ನು ಬದಿಗಿರಿಸಿ ಪ್ರತಿಭಟನೆ ಹಿಂಪಡೆಯುವಂತೆ ತೃಣಮೂಲ ಕಾಂಗ್ರೆಸ್ ನಾಯಕ, ಪಶ್ಚಿಮಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ವೈದ್ಯರಲ್ಲಿ ವಿನಂತಿಸಿದ್ದಾರೆ. ಎಲ್ಲ ಸಮಸ್ಯೆಗಳನ್ನು ಸರಕಾರದೊಂದಿಗೆ ಚರ್ಚಿಸುವ ಮೂಲಕ ಬಗೆಹರಿಸಲಾಗುವುದು ಎಂದು ಚಟರ್ಜಿ ಅವರು ಪೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

7 ದಿನಗಳ ಒಳಗೆ ಪ್ರತಿಕ್ರಿಯೆ ನೀಡಿ: ಹೈಕೋರ್ಟ್

 ವೈದ್ಯರ ಪ್ರತಿಭಟನೆ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಕೋಲ್ಕೊತ್ತಾ ಉಚ್ಚ ನ್ಯಾಯಾಲಯ, 7 ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಪಶ್ಚಿಮಬಂಗಾಳ ಸರಕಾರಕ್ಕೆ ಸೂಚಿಸಿದೆ. ಈ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೂಡ ನ್ಯಾಯಾಲಯ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ. ರಾಜ್ಯ ಈ ಬಿಕ್ಕಟ್ಟಿಗೆ ಅಂತ್ಯ ಹಾಡಬೇಕು ಹಾಗೂ ಪರಿಹಾರ ಕಂಡುಕೊಳ್ಳಬೇಕು ಎಂದು ಕೂಡಾ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News