ಮಂಡ್ಯ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಿರಿಯ ವೈದ್ಯರ ಪ್ರತಿಭಟನೆ

Update: 2019-06-14 18:32 GMT

ಮಂಡ್ಯ, ಜೂ.14: ಪಶ್ಚಿಮ ಬಂಗಾಳದ ಎನ್‍ಆರ್‍ಎಸ್ ಮೆಡಿಕಲ್ ಕಾಲೇಜಿನ ವೈದ್ಯ ಪರಿಭಾ ಮುಖರ್ಜಿ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಮಿಮ್ಸ್‍ನ ಕಿರಿಯ ವೈದ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಅವರು, ದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖರ್ಜಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ದೇಶದ ಎಲ್ಲಾ ವೈದ್ಯರಿಗೆ ರಕ್ಷಣೆ ಕೊಡಬೇಕು. ಮತ್ತೆ ಇಂತಹ ಕೃತ್ಯ ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಪಶ್ಚಿಮ ಬಂಗಾಳದ ಘಟನೆಯಿಂದ ವೈದ್ಯರು ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವುದು ಹೇಗೆಂಬ ಆತಂಕ, ಭಯ ಉಂಟಾಗಿದೆ. ಹಗಲಿರುಳೆನ್ನದೆ ಸೇವೆ ಮಾಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಡಾ.ಪ್ರಶಾಂತ್ ಡಿ.ಆರ್., ಉಪಾಧ್ಯಕ್ಷೆ ಡಾ.ಕಾವ್ಯ ಕೃಷ್ಣ, ಕಾರ್ಯದರ್ಶಿ ಡಾ.ಕುವಲ್ ಎಚ್.ಜೆ., ಡಾ.ಅಬ್ದುಲ್ ರುಬ್ ಪಟ್ವೇಗರ್, ಡಾ.ನಿಶ್ಚಿತ, ಡಾ.ಪ್ರಿಯ ಟಾಮ್ ಇಳಂಗಿಕ್ಕಲ್, ಇತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News