ಆಸ್ತಿ ವಿಚಾರವಾಗಿ ವ್ಯಕ್ತಿಯ ಕೊಲೆ ಪ್ರಕರಣ: ಐವರ ಬಂಧನ

Update: 2019-06-21 11:43 GMT

ಶಿವಮೊಗ್ಗ, ಜೂ. 21: ಆಸ್ತಿ ವಿಚಾರವಾಗಿ ವ್ಯಕ್ತಿಯೋರ್ವರ ಕೊಲೆ ನಡೆಸಿದ ಆರೋಪದ ಮೇರೆಗೆ ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಶಿರಾಳಕೊಪ್ಪ ಸಮೀಪದ ಕಣಸೋಗಿ ಗ್ರಾಮದ ನಿವಾಸಿಗಳಾದ ಮಂಜಪ್ಪ, ನೀಲಮ್ಮ, ಮಂಜುನಾಥ್, ರವಿ ಹಾಗೂ ರೂಪ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಕಣಸೋಗಿ ಗ್ರಾಮದ ನಿವಾಸಿ ಬಂಗಾರಪ್ಪ (48) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜೂ. 16ರಂದು ಬಂಗಾರಪ್ಪ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಬಂಗಾರಪ್ಪ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಜೂ.19 ರಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News