ದಾವಣಗೆರೆ: ಬರ ನಿರ್ವಹಣೆ ಕುರಿತು ಪರಿಶೀಲನಾ ಸಭೆ- ಜಲ ಅರಿವು ಮೂಡಿಸಲು ಸಚಿವ ಕೃಷ್ಣಭೆರೇಗೌಡ ಸೂಚನೆ

Update: 2019-06-21 18:09 GMT

ದಾವಣಗೆರೆ, ಜೂ.21: ಜಿಲ್ಲೆಯಲ್ಲಿ ಬರಗಾಲವಿದ್ದು, ಈ ವರ್ಷ ಒಂದು ಸಾವಿರ ಚೆಕ್ ಡ್ಯಾಂ ನಿರ್ಮಿಸುವಂತೆ ಹಾಗೂ ಜಲಾಮೃತ ಕಾರ್ಯ ಕ್ರಮದಡಿ ಪ್ರತಿ ಸರಕಾರಿ ಶಾಲೆ, ಕಾಲೇಜು, ಗ್ರಾಪಂಗಳಲ್ಲಿ ನೀರಿನ ಅರಿವು ಮೂಡಿಸುವುದು ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಆಂದೋಲನದ ರೀತಿಯಲ್ಲಿ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.

ಜಿಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯಕ್ರಮಗಳ ಹಾಗೂ ಬರ ನಿರ್ವಹಣೆ ಕುರಿತು ಶುಕ್ರವಾರ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2019ನ್ನು ಜಲವರ್ಷವನ್ನಾಗಿ ಘೋಷಿಸಲಾಗಿದ್ದು, ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಎಲ್ಲ ಕಡೆ ಭೀಕರ ಬರಗಾಲದ ಛಾಯೆ ಇದೆ. ಈ ಹಂತಕ್ಕೆ ತಲುಪಿದ ಮೇಲೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಲಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದರು.

ಶಾಸಕ ಎಂ. ಪಿ. ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಬರಗಾಲವಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಜಿಪಿಎಸ್ ಅಳವಡಿಸಲು ಡಿಸಿ ಸೂಚಿಸಿದ್ದು, ತಕ್ಷಣಕ್ಕೆ ಅದು ಸಾಧ್ಯವಾಗುವುದಿಲ್ಲ. ತುರ್ತಾಗಿ ಬೋರ್ ಕೊರೆಸುವಂತಹ ಕೆಲಸಗಳಿಗೆ ಅನುದಾನ ನೀಡಬೇಕೆಂದರು.
ಎನ್‌ಆರ್‌ಡಿಡಬ್ಲ್ಯುಪಿ ಕಾರ್ಯಕ್ರಮದಡಿ 86.02 ಕೋಟಿ ರೂ. ಜಿಲ್ಲೆಗೆ ನಿಗದಿಗೊಳಿಸಿದ್ದು, ಅದರಲ್ಲಿ 38.4 ಲಕ್ಷ ರೂ. ಬಹುಗ್ರಾಮ ಕುಡಿಯುವ ನೀರಿಗೆ, 47.62 ಲಕ್ಷ ರೂ. ಕುಡಿಯುವ ನೀರಿನ ಯೋಜನೆಗೆ ಮೀಸಲಿಡಲಾಗಿದೆ. ಅದರಲ್ಲಿ 14.59 ಲಕ್ಷ ರೂ.ಮುಂದುವರಿದ ಕಾಮಗಾರಿಗಳಿಗೆ ನಿಗದಿಗೊಳಿಸಿದ್ದು, ಹೊಸ ಕಾಮಗಾರಿಗಳಿಗೆ 33 ಕೋಟಿ ರೂ.ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕುಡಿಯುವ ನೀರಿನ ಕುರಿತು ಪ್ರತಿ ಬಾರಿ ಟೆಂಡರ್ ಕರೆಯುವ ಅಗತ್ಯ ಇಲ್ಲ. ದರ ಗುತ್ತಿಗೆದಾರರೊಂದಿಗೆ ಎಂಪಾನೆಲ್ ಆಗಿ 15 ತಿಂಗಳ ಕಾಲ ಕೆಲಸ ತೆಗೆದುಕೊಳ್ಳಬಹುದು. ಸಂತೇಬೆನ್ನೂರು ಪೈಪ್ ರಿಪ್ಲೇಸ್‌ಮೆಂಟ್ ಮಾಡಬೇಕಾಗಿದ್ದು ಅದನ್ನು ವಿನ್ಯಾಸಗೊಳಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಜಿಲ್ಲೆಗೆ ಟಾಸ್ಕ್‌ಫೋರ್ಸ್ ಅನುದಾನದಲ್ಲಿ 5 ಕೋಟಿ ರೂ., ಪಂಚಾಯತ್ ರಾಜ್ ಇಲಾಖೆಯಿಂದ 7.5 ಕೋಟಿ ರೂ. ನೀಡಲಾಗಿತ್ತು. ಪಂಚಾಯತ್ ರಾಜ್ ಅಡಿಯಲ್ಲಿ 2.80 ಕೋಟಿ ರೂ. ಖರ್ಚಾಗಿದ್ದು ಬಾಕಿ ಅನುದಾನವನ್ನು ಶೀಘ್ರವಾಗಿ ಖರ್ಚು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೋಡ ಬಿತ್ತನೆ: ಶಾಸಕರು, ಜಿಪಂ ಸದಸ್ಯರು ಮೋಡ ಬಿತ್ತನೆ ಮಾಡುವಂತೆ ಸಚಿವರಿಗೆ ಮನವಿ ಮಾಡಿದಾಗ, ಸಚಿವರು ರಾಜ್ಯಾದ್ಯಂತ ಜುಲೈ ಎರಡನೇ ವಾರದಿಂದ ಮೋಡ ಬಿತ್ತನೆ ಆರಂಭಿಸಲಾಗುವುದು ಎಂದು ಹೇಳಿದರು. ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಜಿಪಂ ಸದಸ್ಯ ವಾಗೀಶ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿಪಂ ಸಿಇಒ ಎಚ್.ಬಸವರಾಜೇಂದ್ರ, ಉಪ ಕಾರ್ಯದರ್ಶಿ ಭೀಮಾನಾಯ್ಕ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಪಂ ಸದಸ್ಯರು ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 256 ಚೆಕ್ ಡ್ಯಾಂಗೆ ಪ್ರಸ್ತಾವವಿದೆ. ಆದರೆ ಇದು ಜಿಲ್ಲೆಗೆ ಸಾಕಾಗುವುದಿಲ್ಲ. ಜಿಲ್ಲೆಯಲ್ಲಿ ಹಳ್ಳಗಳಿಗೆ ಕೊರತೆ ಇಲ್ಲ. ಹಳ್ಳ ಇರುವೆಡೆ ಚೆಕ್‌ಡ್ಯಾಂ ನಿರ್ಮಿಸಿದರೆ ನೀರಿನ ಸಂರಕ್ಷಣೆ ಸಾಧ್ಯ. ಪ್ರತಿ ಗ್ರಾಪಂನಲ್ಲಿ ಸರಾಸರಿ 5ರಂತೆ ಚೆಕ್‌ಡ್ಯಾಂ ನಿರ್ಮಿಸಿ, ಅದಕ್ಕೆ ಸಮನಾಗಿ ನಾಲೆ ನಿರ್ವಹಣೆ, ಕೆರೆ ಹೂಳೆತ್ತುವುದನ್ನು ಸರಿದೂಗಿಸಿಕೊಂಡು ನಿರ್ಮಿಸಬೇಕು. ಈ ವರ್ಷ ಕನಿಷ್ಠ ಜಿಲ್ಲೆಯಲ್ಲಿ ಒಂದು ಸಾವಿರ ಚೆಕ್‌ಡ್ಯಾಂ ನಿರ್ಮಿಸಬೇಕು.
- ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

‘8 ಜಿಲ್ಲೆಗೆ ಜಲಧಾರೆ ಯೋಜನೆ ವಿಸ್ತರಣೆ’
ಜಲಮೂಲವನ್ನು ಆಧಾರವಾಗಿಟ್ಟುಕೊಂಡು ಬಹುಗ್ರಾಮ ಯೋಜನೆ ವಿನ್ಯಾಸಗೊಳಿಸಲಾಗುವುದು. ಈ ಬಾರಿ ರಾಯಚೂರು, ಮಂಡ್ಯ, ಕೋಲಾರ, ಬೀದರ್ ಸೇರಿದಂತೆ 5 ಜಿಲ್ಲೆಯಲ್ಲಿ ಜಲಧಾರೆ ಯೋಜನೆಯಡಿ ಹಳೆ ನ್ಯೂನತೆಗಳನ್ನು ಸರಿಪಡಿಸಿ ನೀರು ಒದಗಿಸುವ ಯೋಜನೆ ಹಾಕಿಕೊಂಡಿದ್ದು, ಮುಂದಿನ ಸಾಲಿನಲ್ಲಿ ದಾವಣಗೆರೆ ಸೇರಿದಂತೆ 8 ಜಿಲ್ಲೆಗೆ ಜಲಧಾರೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News