ಜೋಕಟ್ಟೆ ಕಟ್ಟಿದ ಶಹರದ ಕಟ್ಟೆ

Update: 2019-06-23 18:41 GMT

ಕಟ್ಟೆಯೆಂದರೆ ಇರುವುದೇ ಹರಟೆ ಹೊಡೆಯುವುದಕ್ಕೆ. ಅಲ್ಲಿ ಬರುವ ವಿಷಯಗಳು ಒಂದೆರಡಲ್ಲ. ಹಾಸ್ಯ, ರಾಜಕೀಯ, ನೋವು, ನಲಿವು ಇವೆಲ್ಲವೂ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ಕಟ್ಟೆಯಲ್ಲಿ ಕುಳಿತು ಚರ್ಚಿಸಲಾಗುತ್ತದೆ. ಪ್ರತಿ ಹಳ್ಳಿಗಳಲ್ಲೂ ಇಂತಹ ಒಂದು ಪಂಚಾಯತ್ ಕಟ್ಟೆಯಿರುತ್ತದೆ ಮತ್ತು ಒಂದಿಷ್ಟು ಜನರ ಗುಂಪು ಹರಟೆ ಹೊಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ನಗರಗಳಲ್ಲೂ ಕಟ್ಟೆಯಿದ್ದರೆ? ಶ್ರೀನಿವಾಸ ಜೋಕಟ್ಟೆಯವರ ಕೃತಿಯೆಂದರೆ ಶಹರದ ಕಟ್ಟೆಯಿದ್ದಂತೆ. ಅಲ್ಲಿ ಚರ್ಚೆಯಾಗದ ವಿಷಯಗಳಿಲ್ಲ. ಇದೀಗ ಅವರು ‘ಶಹರದ ಕಟ್ಟೆ’ ಎಂಬ ಹೆಸರಲ್ಲೇ ಲೇಖನಗಳ ಸಂಗ್ರಹವೊಂದನ್ನು ಹೊರತಂದಿದ್ದಾರೆ.
 ಈ ಪುಸ್ತಕಕ್ಕೆ ನಿರ್ದಿಷ್ಟ ಚೌಕಟ್ಟುಗಳಿಲ್ಲ. ಎಲ್ಲ ವಿಷಯ, ವಸ್ತುಗಳನ್ನು ಲೇಖಕರು ಮುಟ್ಟಿ ನೋಡಿದ್ದಾರೆ. ಅಂತರ್‌ರಾಷ್ಟ್ರೀಯ ರಾಜಕೀಯಗಳನ್ನು ರೊಹಿಂಗ್ಯಾ ರೋದನ ಲೇಖನದಲ್ಲಿ ಚರ್ಚಿಸಿದರೆ, ಎರಡನೆಯ ಲೇಖನದಲ್ಲಿ ಪ್ರವಾಸ ಕಥನಕ್ಕೆ ಇಳಿದು ಬಿಡುತ್ತಾರೆ ಮತ್ತೆ ಪುಟ ಹೊರಳಿಸಿದರೆ ಅಲ್ಲಿ ವ್ಯಕ್ತಿ ಚಿತ್ರವಿರುತ್ತದೆ. ಹೆಚ್ಚಿನ ಲೇಖನಗಳು ಮುಂಬೈ ಕೇಂದ್ರವಾಗಿಟ್ಟು ಬರೆದವುಗಳು. ಅವರ ಕಾಯಕದ ಬದುಕು ಮುಂಬೈಯನ್ನು ಅವಲಂಬಿಸಿರುವುದೇ ಇದಕ್ಕೆ ಕಾರಣ. ಒಳನಾಡ ಕನ್ನಡಿಗರು ಕಂಡರಿಯದ ಮುಂಬೈಯ ಸೋಜಿಗಗಳನ್ನು ಅವರು ವರದಿ ರೂಪದಲ್ಲಿ ಮಂಡಿಸುತ್ತಾರೆ. ಅಲ್ಲಿಯ ಕಟ್ಟೆಗಳು, ವ್ಯಕ್ತಿಗಳು, ಭಾಷಾ ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ಇಲ್ಲಿ ಒಂದರಜೊತೆಗೆ ಒಂದಾಗಿ ಕೋಲಾಜ್ ಕಲಾಕೃತಿಯಾಗಿದೆ.ಅಯೋಧ್ಯೆ ಕಟ್ಟಡ ಧ್ವಂಸಕ್ಕೆ 25 ವರ್ಷ, ಕುರೂಪ ಎಂಬ ಹಿಂಸೆ ಮೊದಲಾದ ಲೇಖನಗಳಲ್ಲಿ ಕೆಲವು ಗಾಯಗಳನ್ನು ಮುಟ್ಟುವ ಸಾಹಸ ಮಾಡುತ್ತಾರೆ.
ಜೋಕಟ್ಟೆಯವರ ಬರಹವೆಂದರೆ ಆಡು ಮೆದ್ದಂತೆ. ಅವರು ಮೇಲಿಂದ ಮೇಲೆ ಕಂಡದ್ದನ್ನೆಲ್ಲ ಬರೆಯುತ್ತಲೇ ಹೋಗುತ್ತಾರೆ. ಒಂದು ನಿರ್ದಿಷ್ಟ ವಿಷಯವನ್ನು ಆರಿಸಿ ಅದರ ಆಳಕ್ಕೆ ಇಳಿಯುವ ಪ್ರಯ ತ್ನ ಮಾಡುವುದು ಕಡಿಮೆ. ಅವರ ಬರಹದ ಹಿಂದಿರುವ ಅಗಾಧ ಶ್ರಮ, ಓಡಾಟಗಳ ನಡುವೆಯೂ ಈ ಮಿತಿಯನ್ನು ನಾವು ಗುರುತಿಸಬೇಕಾಗಿದೆ. ಮುಖ್ಯವಾಗಿ ಯಾವುದೇ ನಿರ್ದಿಷ್ಟ ರಾಜಕೀಯ ನಿಲುವುಗಳ ಜೊತೆಗೆ ಸ್ಪಷ್ಟವಾಗಿ ಗುರುತಿಸಿಕೊಳ್ಳದ ಕಾರಣ ಅವರ ಬರಹ ಮುಕ್ತವಾಗಿ ಸಂಚರಿಸುತ್ತದೆ.
ಆದಿತ್ಯ ಪಬ್ಲಿಕೇಶನ್ಸ್ ಬೆಳಗಾವಿ ಹೊರತಂದಿರುವ ಶಹರದಕಟ್ಟೆ ಕೃತಿಯ ಒಟ್ಟು ಪುಟಗಳು 180. ಬೆಲೆ 185 ರೂಪಾಯಿ. ಆಸಕ್ತರು 09869394694 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News