ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ: ರಾಯಚೂರಿನ ಕರೇಗುಡ್ಡದಲ್ಲಿ ಸಕಲ ಸಿದ್ಧತೆ

Update: 2019-06-25 12:36 GMT

ರಾಯಚೂರು, ಜೂ.25: ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೂ.26ರಂದು ಗ್ರಾಮವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಜನರ ಅಹವಾಲು ಸ್ವೀಕರಿಸುವ ಜನತಾ ದರ್ಶನದ ಬೃಹತ್ ವೇದಿಕೆ ಹಾಗೂ ಮುಖ್ಯಮಂತ್ರಿ ವಾಸ್ತವ್ಯ ಮಾಡಲಿರುವ ಶಾಲೆ, ಪಾರ್ಕಿಂಗ್, ವಿವಿಧ ಮಳಿಗೆಗಳು ಸೇರಿದಂತೆ ನಡೆದಿರುವ ಸಿದ್ಧತೆಗಳನ್ನು ಪಶುಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಪರಿಶೀಲನೆ ನಡೆಸಿದರು.

ಬೃಹತ್ ವೇದಿಕೆ ಹಾಗೂ ವಿವಿಧೆಡೆಯಿಂದ ಆಗಮಿಸುವ ಜನರಿಗೆ ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ನಾಡಗೌಡ, ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಇವರಿಗೆ ಸ್ಥಳೀಯ ಶಾಸಕ ರಾಜವೆಂಕಟಪ್ಪನಾಯಕ್ ಹಾಗೂ ಇನ್ನಿತರ ಮುಖಂಡರು ಸಾಥ್ ನೀಡಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಸಮಸ್ಯೆ ಕುರಿತು ಬೆಂಗಳೂರಿಗೆ ಹೋಗಿ ಎಲ್ಲರನ್ನು ಕರೆದು ಐಸಿಸಿ ಸಮಿತಿ ಸಭೆ ಕರೆದು 31 ಟಿಎಂಸಿ ಹೂಳೆತ್ತುವುದು, ಸಮಾನಾಂತರ ಜಲಾಶಯ ಮತ್ತು ನದಿ ಜೋಡಣೆ ಕುರಿತು ಚರ್ಚೆಯಾಗಿದೆ ಎಂದರು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ಮಾಡಿ ಬೋರ್ಡ್‌ಗೆ ನೀಡಲಾಗುವುದು. ಉಭಯ ರಾಜ್ಯಗಳೊಂದಿಗೆ ಚರ್ಚಿಸಿ ಇದೇ ವರ್ಷವೇ ಕಾಮಗಾರಿ ಆರಂಭಿಸಲಾಗುವುದು ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.

ರಾಯಚೂರು ವಿವಿಗೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೇಟಿಯಾಗಿ ಇದರ ತುರ್ತು ವಿವರಿಸಿ ಮನವಿ ಪತ್ರ ಸಲ್ಲಿಸಿ ಕಾರ್ಯಾರಂಭಕ್ಕೆ ಕ್ರಮವಹಿಸಲಾಗುವುದು. ಮಾನ್ವಿಗೆ ಮಿನಿ ವಿಧಾನಸೌಧ, ರಿಂಗ್ ರಸ್ತೆ ನಿರ್ಮಾಣ, ರಾಯಚೂರು ಐಐಟಿ, ಮಾನ್ವಿ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಮುಖ್ಯಮಂತ್ರಿ ಈಡೇರಿಸಲಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿಯವರು 25 ಸಾವಿರ ಜನರೊಂದಿಗೆ ಜನತಾ ದರ್ಶನ ವೇದಿಕೆ ಎದುರುಗಡೆಯೇ ಪ್ರತಿಭಟನೆ ಮಾಡುವುದಾಗಿ ತಿಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ವೆಂಕಟರಾವ್ ನಾಡಗೌಡ, ಮುಖ್ಯಮಂತ್ರಿ ಬಂದ ಸಂದರ್ಭದಲ್ಲಿ ಯಾವ ರೀತಿ ಭದ್ರತಾ ವ್ಯವಸ್ಥೆ ಮಾಡಬೇಕು ಎಂಬುದನ್ನು ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ ಎಂದರು.

ಗಲಾಟೆ ಮಾಡಿದರೆ ಕೆಲಸ ಮಾಡುತ್ತಾರೆ ಎಂಬುದು ತಪ್ಪುಕಲ್ಪನೆ. ಅವರು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. 25-30 ಸ್ವಾಮೀಜಿಗಳು ನೀರಾವರಿ ವಿಷಯ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಸಮಯ ಕೇಳಿದ್ದು, ಅವರಿಗೆ ಸಂಜೆ 6ರ ನಂತರ ಸಮಯ ನೀಡಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News