ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ಆಶಯಗಳಿಗೆ ಮಾರಕ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2019-06-27 15:00 GMT

ಬೆಂಗಳೂರು, ಜೂ.27: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯು ಸಂವಿಧಾನದ ಮೌಲ್ಯಗಳಿಗೆ ಹಾಗೂ ಭಾರತದ ಗಣತಂತ್ರ ವ್ಯವಸ್ಥೆಗೆ ಮಾರಕವೆಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಭಿಪ್ರಾಯಿಸಿದ್ದಾರೆ. ಗುರುವಾರ ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಮಹಾಮಂಡಲ, ರಾಜ್ಯ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

ಇಡೀ ದೇಶ ಆಡಳಿತ ವ್ಯವಸ್ಥೆ ಸಂವಿಧಾನದ ಆಶಯದಂತೆ ಮುನ್ನಡೆಯುತ್ತಿದೆ. ಆದರೆ, ಕೇಂದ್ರ ಸರಕಾರದ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂವಿಧಾನದ ಆಶಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾಜವಾದ ಹಾಗೂ ಗಣತಂತ್ರದ ಅಂಶಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಶಿಕ್ಷಣ ನೀತಿ ಕರಡಿನಲ್ಲಿ ಸಂವಿಧಾನದ ಅಂಶಗಳೆ ಇಲ್ಲವೆಂದಾದರೆ, ಯಾವ ಆಶಯದಡಿಯಲ್ಲಿ ಶಿಕ್ಷಣ ನೀತಿ ರೂಪಿತಗೊಂಡಿದೆ ಎಂಬ ಅನುಮಾನ ಕಾಡುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಮೊದಲ ಬಾರಿಗೆ 1968ರಲ್ಲಿ ಕೊಠಾರಿ ವರದಿಯ ಆಧಾರದಲ್ಲಿ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು. ನಂತರ ಇದೇ ನೀತಿಯನ್ನು 1986ರಲ್ಲಿ ಪರಿಷ್ಕರಿಸಿ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಯಿತು. 1992ರಲ್ಲಿಯೂ ಹಿಂದಿನ ಶಿಕ್ಷಣ ನೀತಿಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಶಿಕ್ಷಣ ನೀತಿಯನ್ನು ಪರಿಷ್ಕರಿಸಲಾಯಿತು. ಆದರೆ, ಈಗ 2019ರಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಹಿಂದಿನ ಯಾವ ನೀತಿಗಳನ್ನು ಪರಿಶೀಲನೆ ನಡೆಸಿರುವುದರ ಬಗ್ಗೆ ಎಲ್ಲಿಯೂ ಉಲ್ಲೇಖಿಸಿರುವ ದಾಖಲೆಗಳಿಲ್ಲವೆಂದು ಅವರು ಹೇಳಿದರು.

ಕೇಂದ್ರ ಸರಕಾರ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಾಗ ಅನುಸರಿಸಿರುವ ಕ್ರಮಗಳು ಕೂಡ ಹಲವು ಅನುಮಾನಗಳು, ಗೊಂದಲಗಳಿಗೆ ಎಡೆ ಮಾಡಿಕೊಡುತ್ತದೆ. ವಿದ್ಯಾರ್ಥಿ, ಶಿಕ್ಷಕರು, ಪೋಷಕರನ್ನು ಗಮನದಲ್ಲಿರಿಸಿ ಪರಿಪೂರ್ಣವಾದ ಶಿಕ್ಷಣ ನೀತಿಯನ್ನು ರೂಪಿಸಲು ಶಿಕ್ಷಣ ತಜ್ಞನಿಂದ ಮಾತ್ರ ಸಾಧ್ಯ. ಅದರೆ, ಈ ಮಹತ್ವದ ಕಾರ್ಯಕ್ಕೆ ವಿಜ್ಞಾನಿ ಕಸ್ತೂರಿ ರಂಗನ್ ಅವರನ್ನು ನೇಮಿಸಿದ್ದು ಸರಿಯಾದ ಕ್ರಮವಲ್ಲವೆಂದು ಅವರು ತಿಳಿಸಿದರು.

ಕರಡು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಾಗ ಕಸ್ತೂರಿ ರಂಗನ್, ಯಾವ ಶಿಕ್ಷಕರ ಸಂಘಗಳನ್ನು, ಶಾಲಾ, ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿರುವ ಉದಾಹರಣೆ ಇಲ್ಲ. ಶಿಕ್ಷಕರ, ವಿದ್ಯಾರ್ಥಿಗಳ ಅಭಿಪ್ರಾಯಗಳಿಲ್ಲದ ಶಿಕ್ಷಣ ನೀತಿಯೊಂದು ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬಲ್ಲದೆ ಎಂದು ಅರು ಅನುಮಾನ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ್ ಸೇರಿದಂತೆ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಘಗಳ ಪದಾಧಿಕಾರಿಗಳು ಹಾಗೂ ಭಾರತ ಜ್ಞಾನ-ವಿಜ್ಞಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

-ಭಾರತದಂತಹ ಗಣತಂತ್ರ ವ್ಯವಸ್ಥೆಯಿರುವ ಇಡೀ ದೇಶಕ್ಕೆ ಒಂದೇ ರೀತಿಯ ಶಿಕ್ಷಣ ನೀತಿ ಬೇಕಿಲ್ಲ. ಕೇಂದ್ರ ಸರಕಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚೌಕಟ್ಟನ್ನು ಹಾಕಿಕೊಟ್ಟು, ಅದರ ಆಶಯದಂತೆ ಆಯಾ ರಾಜ್ಯಗಳು ತಮಗೆ ಸರಿ ಹೊಂದುವ ಶಿಕ್ಷಣ ನೀತಿಗಳನ್ನು ರೂಪಿಸಿಕೊಳ್ಳುವುದೆ ಗಣತಂತ್ರ ವ್ಯವಸ್ಥೆಯ ನಿಜವಾದ ಸ್ವರೂಪ. ಆದರೆ, ಕೇಂದ್ರ ಸರಕಾರ ಗಣತಂತ್ರ ವ್ಯವಸ್ಥೆಗೆ ವಿಮುಖವಾಗಿ ಚಲಿಸುತ್ತಿದೆ.

-ನಮ್ಮ ಸಂವಿಧಾನದ ನಿಜವಾದ ಆಶಯ ಸರಕಾರದ ಯೋಜನೆಗಳು, ಕಾರ್ಯಕ್ರಮಗಳು ವಿಕೇಂದ್ರಿಕರಣದೆಡೆಗೆ ಸಾಗುವುದಾಗಿದೆ. ಆದರೆ, ಕೇಂದ್ರ ಸರಕಾರ ಒಂದು ಭಾಷೆ, ಒಂದು ಆಡಳಿತದ ಹೆಸರಿನಲ್ಲಿ ಅಧಿಕಾರವನ್ನು ಕೇಂದ್ರಿಕರಿಸಲು ಹೊರಟಿದೆ. ಇದರಿಂದ ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಧಕ್ಕೆ ತರುವಂತಹದ್ದಾಗಿದೆ.

-ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಪ್ರಕಟಿಸಬೇಕು. ಹಾಗೂ ಕರಡಿನ ಕುರಿತು ಸೂಕ್ತವಾದ ಚರ್ಚೆಗೆ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಕಲ್ಪಿಸಬೇಕು.

-ನಿರಂಜನಾರಾಧ್ಯ, ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News