ಯುವಪೀಳಿಗೆಗೆ ಸಂವಿಧಾನದ ಅರಿವು ಅಗತ್ಯ: ‘ಸಂವಿಧಾನ ಓದು’ ಕಾರ್ಯಾಗಾರದಲ್ಲಿ ನಾಗಮೋಹನ್ ದಾಸ್

Update: 2019-06-27 17:17 GMT

ಮೂಡಿಗೆರೆ, ಜೂ.27: ಪ್ರಸ್ತುತ ಯುವಪೀಳಿಗೆಗೆ ಸಾಕ್ಷರತೆಯ ಜೊತೆಗೆ ಕಾನೂನು ಅರಿವು, ಸಂವಿಧಾನದ ಅರಿವು ಅಗತ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದ್ದಾರೆ.

ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಅಭಿಯೋಜನಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸಂತ ಮಾರ್ಥಾಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶ ವಿವಿಧ ಜಾತಿಗಳಿಂದ ಕೂಡಿದ್ದು, ವಂಶಪರಂಪರೆಯಿಂದ ಬಂದಂತಹ ಕುಲ ಕಸುಬುಗಳನ್ನು ಅನುಸರಿಸುವುದನ್ನು ಬಹುಪಾಲು ನಿಲ್ಲಿಸಿ ಎಲ್ಲಾ ಕ್ಷೇತ್ರಗಳಲ್ಲೂ ಯಾವುದೇ ಭಿನ್ನ ಬೇಧವಿಲ್ಲದೆ ಕೆಲಸಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನವಾಗಿದೆ. ಧೀನ ದಲಿತರ, ಬುಡಕಟ್ಟು ಜನರ ಹಾಗೂ ಶೋಷಿತ ವರ್ಗದವರನ್ನು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ತರುವಂತಹ ಕೀರ್ತಿಯೂ ಸಂವಿಧಾನಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಸಂವಿಧಾನವು ಬಹುಬೇಗನೆ ಅರ್ಥವಾಗಲು ಕಾದಂಬರಿಯಲ್ಲ, ಕವಿತೆಯಲ್ಲ. ಅದೊಂದು ರಾಜಕೀಯ ಅರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಆದ್ದರಿಂದ ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ-ಮುನ್ನಲೆ ತಿಳಿದಿರಬೇಕು. ಅಲ್ಲದೆ ಭಾರತ ದೇಶವನ್ನು ಅರ್ಥಮಾಡಿಕೊಳ್ಳದ ಹೊರತು ಭಾರತ ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನ ಅರ್ಥ ಮಾಡಿಕೊಳ್ಳದಿದ್ದರೆ ಅದರ ಮೂಲ ತತ್ವಗಳು ತಿಳಿಯುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಸಂವಿಧಾನ ಓದಿ ಅದನ್ನು ಅರಿತು ಅದರಂತೆ ನಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಾಹಿರಾ ಫೆರ್ನಾಂಡಿಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜ್ ಚೇಂಗಟಿ, ಮೂಡಿಗೆರೆ ಹಿರಿಯ ಸಿವಿಲ್ ನ್ಯಾಯಾಧೀಶೆ ಶಶಿಕಲಾ ಎಂ.ಎಸ್., ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ್, ಹೆಚ್ಚುವರಿ ನ್ಯಾಯಾಧೀಶ ಹರೀಶ್ ಕೆ.ಎಂ., ಹಿರಿಯ ವಕೀಲ ಎಂ.ಎಸ್.ಗೋಪಾಲಗೌಡ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಎಚ್.ಸಿ.ಸಹಾಯಕ ಸರಕಾರಿ ಅಭಿಯೋಜಕ ಸುನೀಲ್ ಪಾಟೀಲ್, ರಾಜಶೇಖರ್ ಕಿಗ್ಗಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News