ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮಡಿಕೇರಿಯಲ್ಲಿ ರೈತ ಸಂಘ ಧರಣಿ

Update: 2019-06-28 18:02 GMT

ಮಡಿಕೇರಿ, ಜೂ.28: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿರುವ ದಲಿತರು, ಆದಿವಾಸಿಗಳು, ಬಡ ರೈತರು, ಕೂಲಿ ಕಾರ್ಮಿಕರಿಗೆ ಕೃಷಿಭೂಮಿ, ನಿವೇಶನದ ಹಕ್ಕುಪತ್ರ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಉದ್ಯೋಗ ದೊರಕಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಾಲ್, ಜಿಲ್ಲಾ ಸಮಿತಿ ಅಧ್ಯಕ್ಷ ಹೆಚ್.ಸಣ್ಣಪ್ಪ ಅವರುಗಳ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಾಂಧಿ ಮಂಟಪದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 

ಈ ಸಂದರ್ಭ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಕಂದೆಗಲ್, ಜಿಲ್ಲೆಯ ಹಲವು ಭಾಗಗಳಲ್ಲಿ ದಲಿತರು, ಆದಿವಾಸಿಗಳೂ ಬಡ ರೈತರ ಕೂಲಿ ಕಾರ್ಮಿಕರು ಸ್ವಂತ ಭೂಮಿ ಇಲ್ಲದೆ ಉದ್ಯೋಗವಿಲ್ಲದೆ, ಸ್ವಂತ ನಿವೇಶನ ಇಲ್ಲದೇ ಪರದಾಡುತ್ತಿದ್ದು, ಉಳ್ಳವರ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡು ಜೀವನ ಸಾಗಿಸುವಂತಾಗಿದೆ. ಇನ್ನು ಹಲವರು ಒಂದು, ಎರಡು ಏಕರೆ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸುತ್ತ ಇದ್ದರೂ, ಬಡವರ ಅರ್ಜಿಗಳು ವಿಲೇವಾರಿ ಆಗದೆ ಮೂಲೆ ಸೇರಿವೆಯೆಂದು ಬೇಸರ ವ್ಯಕ್ತಪಡಿಸಿದರು.
ದಿಡ್ಡಳ್ಳಿ ಆದಿವಾಸಿಗಳನ್ನು ಬಸವನಹಳ್ಳಿ ಬ್ಯಾಡಗೊಟ್ಟಗಳಿಗೆ ಸ್ಥಳಾಂತರಿಸಿದ್ದು, ಇಲ್ಲಿರುವವರಿಗೆ ಅಗತ್ಯ ಕೆಲಸವಿಲ್ಲದೆ ಆಹಾರಕ್ಕೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಕಡು ಬಡವರು, ಸರ್ಕಾರದ ಪರಿಹಾರ, ಮನೆ, ಮೂಲಭೂತ ಸೌಕರ್ಯಗಳಿಂದ ವಂಚನೆಗೆ ಒಳಗಾಗಿದ್ದಾರೆ. ಸಂಘಟನೆಯ ಮೂಲಕ ಬಡವರ್ಗದ ಮಂದಿಗೆ ನಿವೇಶನ, ಭೂಮಿ, ಹಕ್ಕುಪತ್ರ ನೀಡುವಂತೆ ಸಲ್ಲಿಸಿದ ಮನವಿಗೆ ನ್ಯಾಯ ದೊರಕಿಲ್ಲ.  ಆದ್ದರಿಂದ ಜಿಲ್ಲಾಡಳಿತ ತಮ್ಮ ಬೇಡಿಕೆಗಳಿಗೆ ತಿಂಗಳ ಒಳಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದರು.

ಬೇಡಿಕೆಗಳು
ಕುಶಾಲನಗರ ಹೋಬಳಿ 6ನೇ ಹೊಸಕೋಟೆಯ ಅಂದಾನಿಪುರದಲ್ಲಿರುವ 70 ಬಡ ಮತ್ತು ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಪೊಲೀಸ್ ಇಲಾಖೆಗೆ ಸೇರಿಸಿರುವುದನ್ನು ರದ್ದುಗೊಳಿಸಿ, ಸಾಗುವಳಿ ಮಾಡಿರುವ ಬಡವರಿಗೆ ಮತ್ತು ದಲಿತರಿಗೆ ಹಕ್ಕುಪತ್ರ ನೀಡಬೇಕು, ದಿಡ್ಡಳ್ಳಿಯಿಂದ ಬಸವನಹಳ್ಳಿ ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿರುವ ಆದಿವಾಸಿಗಳಿಗೆ ಉದ್ಯೋಗ ದೊರಕಿಸಿಕೊಡಬೇಕು, ತಲಾ 3 ಏಕರೆ ಕೃಷಿ ಭೂಮಿ ನೀಡಬೇಕು, ನಾಗರಹೊಳೆ ಅರಣ್ಯದ ಗೋಣಿಗದ್ದೆ ಕೊಡಂಗೆ ಹಾಡಿಯ ಜನರಿಗೆ ಹಕ್ಕುಪತ್ರ ನೀಡುವುದರೊಂದಿಗೆ ಮೂಲಭೂತ ಸೌಕರ್ಯದೊಂದಿಗೆ ಅರಣ್ಯದಂಚಿನಲ್ಲಿ ಭೂಮಿ ನೀಡಿ ಹಕ್ಕು ಪತ್ರ ನೀಡಬೇಕು, ಜಿಲ್ಲೆಯಲ್ಲಿರುವ ಸಿ ಮತ್ತು ಡಿ ದರ್ಜೆಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ದಲಿತ ಆದಿವಾಸಿಗಳಿಗೆ, ಭೂಹೀನ ಬಡವರಿಗೆ ತಲಾ 3 ಏಕರೆ ಹಂಚಬೇಕು, ಸೋಮವಾರಪೇಟೆಯ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ಇರುವ ಕುಟುಂಬ ಹಾಗೂ ದಲಿತ ಕಾರ್ಮಿಕರಿಗೆ ಸರ್ವೆ ನಂ. 56/1 ರಲ್ಲಿ 3 ಏಕರೆ ನಿವೇಶನ ಹಂಚಬೇಕು ಮತ್ತು ಅಂಬೇಡ್ಕರ್ ಭವನಕ್ಕೆ 50 ಸೆಂಟ್ಸ್ ಜಾಗ ನೀಡಬೇಕು. ವೀರಾಜಪೇಟೆಯ ಆರ್ಜಿ ತರ್ಮೆಕಾಡು ಪೈಸಾರಿಯಲ್ಲಿ 60 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿರುವ ದಲಿತರು, ಆದಿವಾಸಿಗಳಿಗೆ ತಕ್ಷಣ ಹಕ್ಕುಪತ್ರ ನೀಡಬೇಕು, ಮಹಾ ಮಳೆಯಿಂದ ಬದುಕು ಕಳೆದುಕೊಂಡಿರುವ ದಲಿತರು, ಕೂಲಿ ಕಾರ್ಮಿಕರಿಗೆ ಪರಿಹಾರ ಮತ್ತು ನಿವೇಶನ ಭೂಮಿ ನೀಡಬೇಕು, ಬಲಾಢ್ಯರು ಸುಳ್ಳು ದಾಖಲೆ ನೀಡಿ ಪಡೆದುಕೊಂಡಿರುವ ಸೌಲಭ್ಯ, ಪರಿಹಾರವನ್ನು ತನಿಖೆ ನಡೆಸಿ ಹಿಂಪಡೆಯಬೇಕು, ಕಂಪೆನಿಗಳಿಗೆ ಭೂಮಿ ನೀಡುವುದನ್ನು ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಕರ್ನಾಟಕ  ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್. ಜೆ. ಪ್ರಕಾಶ್, ಸದಸ್ಯ ಜಯಣ್ಣ, ಸಿಪಿಐಎಂಎಲ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News