ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಸಚಿವ ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ..

Update: 2019-07-01 12:50 GMT

ಬೆಂಗಳೂರು, ಜು.1: ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ನನ್ನ ಪಾಲಿಗೆ ದೊಡ್ಡ ಶಾಕ್ (ಆಘಾತ). ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್‌ಸಿಂಗ್ ನಮ್ಮ ಪಕ್ಷ ಬಿಟ್ಟು ಹೋಗುವುದಿಲ್ಲವೆಂದು ಹೇಳಿದ್ದರು. ಆದರೆ, ವೈಯಕ್ತಿಕವಾಗಿ ಏನೇನು ಸಮಸ್ಯೆ ಇದ್ದವೋ ಗೊತ್ತಿಲ್ಲ. ಆ ಸಮಸ್ಯೆಗಳ ಬಗ್ಗೆ ಹೇಳುತ್ತಿಲ್ಲ ಎಂದರು.

ಅನಂದ್‌ ಸಿಂಗ್‌ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಾನು ಅವರನ್ನು ಭೇಟಿಯಾಗಿಲ್ಲ. ಇನ್ನು ನನಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಚಿಕಿತ್ಸೆಗೆ ಆಸ್ಪತ್ರೆಯಲ್ಲಿದ್ದೆ. ಅವರೊಂದಿಗೆ ಮಾತನಾಡಲು ಸಿಗುತ್ತಿಲ್ಲ. ಬೇರೆಯವರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ಜಿಂದಾಲ್ ವಿಚಾರವಾಗಿ ಆನಂದ್ ಸಿಂಗ್ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಂದಾಲ್ ವೈಯಕ್ತಿಕ ವಿಚಾರ ಅಲ್ಲ. ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗಲು ಜಿಂದಾಲ್ ಗೆ ಭೂಮಿ ನೀಡಲು ನಿರ್ಧರಿಸಲಾಗಿತ್ತು ಎಂದರು. ಗಣಿಗಾರಿಕೆಗಾಗಿ ಜಿಂದಾಲ್ ಗೆ ಭೂಮಿ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಭೂಮಿಯನ್ನು ಜಿಂದಾಲ್ ಗೆ ಗಣಿಗಾರಿಕೆ ಮಾಡಲು ನೀಡುತ್ತಿಲ್ಲ. ಗಣಿಗಾರಿಕೆ ಜಾಗವನ್ನು ಹರಾಜಿನಲ್ಲಿ ಬಿಡ್ ಮಾಡಬೇಕು. ಈ ರೀತಿ ಗಣಿಗಾರಿಕೆಗೆ ಜಮೀನು ನೀಡುವುದು ನಿಷಿದ್ಧ ಎಂದು ಶಿವಕುಮಾರ್ ಹೇಳಿದರು.

ಈ ವಿಚಾರವಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾನು ಇರಲಿಲ್ಲ. ನಂತರ ದಾಖಲೆ ಪರಿಶೀಲಿಸಿದ ಬಳಿಕ ಈ ಹಿಂದೆ ಯಡಿಯೂರಪ್ಪನವರು ಜಮೀನು ನೀಡಲು ಏನು ಸಹಿ ಮಾಡಿದ್ದರೋ ಅದನ್ನು ಇಂದು ಸಚಿವ ಕೆ.ಜೆ.ಜಾರ್ಜ್ ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದರು. ಈ ಮಧ್ಯೆ ಎಚ್.ಕೆ ಪಾಟೀಲ್ ಸೇರಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅದನ್ನು ಮತ್ತೆ ಪರಿಶೀಲಿಸಿ, ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ನಮ್ಮದು ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಮಾಡಬೇಕೆಂದು ತೀರ್ಮಾನಿಸಿ, ಮೊದಲು ನೀಡಲು ನಿರ್ಧರಿಸಿದ್ದ ಜಮೀನನ್ನು ಈಗ ನೀಡುತ್ತಿದ್ದೇವೆ. ಅವರು ಮೊದಲೇ ದುಡ್ಡು ಕಟ್ಟಿದ್ದರು, ಅವರಿಗೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಕೆಲವು ವಿಚಾರಗಳನ್ನು ನಾವು ಸರಿ ಮಾಡಿದ್ದೇವೆ. ಅಷ್ಟು ಮಾತ್ರ ನನಗೆ ಗೊತ್ತು ಎಂದು ಅವರು ಹೇಳಿದರು.

ಮೊನ್ನೆ ಮುಖ್ಯಮಂತ್ರಿ ಈ ವಿಚಾರವಾಗಿ ಸಂಪುಟ ಉಪ ಸಮಿತಿ ರಚನೆ ಮಾಡಿ ಪರಿಶೀಲನೆ ಮಾಡಲು ಸೂಚಿಸಿದ್ದಾರೆ. ಅವರು ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಹೇಳುತ್ತಾರೆ. ಇದು ಕೇವಲ ಜಿಂದಾಲ್ ಒಂದೇ ವಿಚಾರ ಅಲ್ಲ. ಈ ರಾಜ್ಯಕ್ಕೆ ಕೈಗಾರಿಕೆಗಳು ಬೇಕಾ? ಬೇಡವಾ? ಆರ್ಥಿಕ ಪ್ರಗತಿ ವಿಚಾರದಲ್ಲಿ ಕರ್ನಾಟಕವನ್ನು ಇಡೀ ದೇಶ ನೋಡುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

ನಾವು ಹಿಂದುಳಿದ ಜಿಲ್ಲೆಗಳ ಪಟ್ಟಿ ಮಾಡಿದ್ದು ಬಳ್ಳಾರಿಯನ್ನು ಸೇರಿಸಿದ್ದೇವೆ. ಅಲ್ಲಿ ಕೈಗಾರಿಕೆ ಆರಂಭಿಸಲು ಯಾರಾದರೂ ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಅವರು ಹೇಳಿದರು.

ಆನಂದ್ ನನ್ನ ಸ್ನೇಹಿತ, ನಮ್ಮ ಶಾಸಕ. ಅವರು ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಸೇರಿದ್ದರು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗಲೂ ಆತ ಪಕ್ಷ ತೊರೆಯುತ್ತಾನೆ ಅಂತಾ ನಂಬಿಕೆ ಇಲ್ಲ. ತಕ್ಷಣವೇ ಆನಂದ್ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಯತಿಸುತ್ತೇನೆ ಎಂದು ಅವರು ಹೇಳಿದರು.

ಯಾರೂ ಕೂಡ ಒತ್ತಡ ಇಲ್ಲದೆ ರಾಜೀನಾಮೆ ನೀಡುವುದಿಲ್ಲ. ಯಾರಿಗೂ ಚುನಾವಣೆ ಬೇಡ. ರಾಜೀನಾಮೆ ನೀಡೋದು ಮುಖ್ಯ ಅಲ್ಲ. ಮತ್ತೆ ಚುನಾವಣೆ ಎದುರಿಸಿ ಗೆಲ್ಲೋದು ಮುಖ್ಯ. ಹೀಗಾಗಿ ಸದ್ಯ ಯಾರಿಗೂ ಆ ರಿಸ್ಕ್ ಬೇಡ. ಚುನಾವಣೆ ಆದ ಮೇಲೆ ಯಾರು ಏನೇನಾಗುತ್ತಾರೆ ಅಂತಾ ಬಿಜೆಪಿ ಶಾಸಕರನ್ನೇ ಕೇಳಿ ಅವರೇ ಹೇಳುತ್ತಾರೆ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿ ನಾಯಕರಾಗಲಿ ಯಾರು ಎಷ್ಟೇ ಉತ್ಸುಕರಾದರೂ ಪ್ರಯೋಜನ ಇಲ್ಲ. ಬಿಜೆಪಿ ಶಾಸಕರೇ ಖಾಸಗಿಯಾಗಿ ಏನು ಮಾತನಾಡುತ್ತಿದ್ದಾರೆಂದು ಗೊತ್ತು. ಯಾರಿಗೂ ಚುನಾವಣೆ ಬೇಕಿಲ್ಲ. ಯಾರು ರಾಜೀನಾಮೆ ಕೊಟ್ಟರೂ ಈ ಸರಕಾರಕ್ಕೆ ಏನು ಆಗಲ್ಲ.

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News