ಆರ್ಬಿಐ ಉಪಗವರ್ನರ್ ಆಗಿ ವಿಶ್ವನಾಥನ್ ಮರುನೇಮಕ
ಹೊಸದಿಲ್ಲಿ,ಜು.1: ಭಾರತೀಯ ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಆಗಿ ಎನ್.ಎಸ್.ವಿಶ್ವನಾಥನ್ ಸೋಮವಾರ ಮರುನೇಮಕಗೊಂಡಿದ್ದಾರೆ. ಅವರು ಇನ್ನೂ ಒಂದು ವರ್ಷ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆಂದು ಆರ್ಬಿಐನ ಅಧಿಕೃತ ಆದೇಶ ತಿಳಿಸಿದೆ.
ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ಈ ವರ್ಷದ ಜುಲೈ 4ರಿಂದ ಅನ್ವಯವಾಗುವಂತೆ ಆರ್ಬಿಐನ ಉಪಗವರ್ನರ್ ಆಗಿ ಇನ್ನೂ ಒಂದು ವರ್ಷ ಕಾಲ ವಿಶ್ವನಾಥನ್ ಅವರ ಮರುನೇಮಕಾತಿಗೆ ಅನುಮೋದನೆ ನೀಡಿದೆಯೆಂದು ಸಿಬ್ಬಂದಿ ಸಚಿವಾಲಯವು ಜಾರಿಗೊಳಿಸಿದ ಆದೇಶವು ತಿಳಿಸಿದೆ.
ವಿಶ್ವನಾಥನ್ ಅವರ ಹಾಲಿ ಅಧಿಕಾರಾವಧಿಯು ಜುಲೈ 3ರಂದು ಕೊನೆಗೊಳ್ಳಲಿದೆ. ಆರ್ ಬಿಐನ ಮೂರು ಉಪಗವರ್ನರ್ ಗಳಲ್ಲಿ ವಿಶ್ವನಾಥನ್ ಒಬ್ಬರಾಗಿದ್ದಾರೆ. ಬಿ.ಪಿ.ಕನುಂಗೊ ಹಾಗೂ ಎಂ.ಕೆ. ಜೈನ್ ಇತರ ಇಬ್ಬರು ಉಪಗವರ್ನರ್ಗಳು.
ಆರ್ ಬಿಐನ ಉಪಗವರ್ನರ್ ಹುದ್ದೆಗೆ ವಿರಲ್ ಆಚಾರ್ಯ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ತನ್ನ ಅಧಿಕಾರಾವಧಿ ಕೊನೆಗೊಳ್ಳು ವುದಕ್ಕಿಂತ ಆರು ತಿಂಗಳು ಮೊದಲೇ ವಿರಲ್ ಪದತ್ಯಾಗ ಮಾಡಿದ್ದರು.