ಸಿಎಂ ಕುಮಾರಸ್ವಾಮಿಯನ್ನು ಶ್ಲಾಘಿಸಿದ ಬಿಜೆಪಿ ಶಾಸಕ ಯತ್ನಾಳ್

Update: 2019-07-03 12:55 GMT

ವಿಜಯಪುರ ಜು.3 : ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿದೇಶ ಪ್ರವಾಸದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ವಿಜಯಪುರದಲ್ಲಿಂದು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಒಂದು ಒಳ್ಳೆಯ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಕಾಲಭೈರವೇಶ್ವರನ ಭೂಮಿ ಪೂಜೆಗೆ ತೆರಳಿದ್ದು, ಕಾಲಭೈರವೇಶ್ವರ ಅವರಿಗೂ, ನಮಗೂ ಒಳ್ಳೆಯದು ಮಾಡಲಿ. ಸಿಎಂ ಕುಮಾರಸ್ವಾಮಿ ದ್ವೇಷದ ರಾಜಕಾರಣ ಬಿಟ್ಟು, ಅಭಿವೃದ್ದಿ ಕೆಲಸ ಮಾಡಲಿ ಎಂದು ಹೇಳಿದ್ದಾರೆ.

ಜಿ.ಟಿ.ದೇವೇಗೌಡರ ಹೊಗಳಿಕೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ವಿಚಾರವನ್ನೂ ಪ್ರಸ್ತಾಪಿಸಿದ ಯತ್ನಾಳ್, ಅವರೊಬ್ಬ ನಿಜವಾದ ಒಳ್ಳೆಯ ರಾಜಕಾರಿಣಿ. ಅವರಿಗೆ ಪ್ರಧಾನಿ ಮೋದಿಯವರ ಮೇಲೆ ಗೌರವ ಇದೆ. ಹಾಗಾಗಿ ನಾನು ಅವರಿಗೆ ಕೃತಜ್ಞತೆ ಹೇಳುತ್ತೇನೆ. ಇಂತಹ ರಾಜಕಾರಣಿಗಳು ಕರ್ನಾಟಕಕ್ಕೆ ಬೇಕು ಎಂದರು.

ಕಾಂಗ್ರೆಸ್ ಸಿಎಂ ಕನಸು ಕಾಣುವುದು ಬೇಡ: ರಾಜ್ಯದಲ್ಲಿ ಹಲವು ಕಾಂಗ್ರೆಸ್ ನಾಯಕರು ತಾವು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಆದರೆ ಅವರು ಈ ರೀತಿ ಕನಸು ಕಾಣುವುದು ಬೇಡ. ಕರ್ನಾಟಕದಲ್ಲಿ ಇನ್ನೆಂದೂ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಮಧ್ಯಂತರ ಅಥವಾ ನಾಲ್ಕು ವರ್ಷದ ಬಳಿಕ ಚುನಾವಣೆ ಬಂದರೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News