ಯಾವುದೇ ಶಾಸಕರು ರಾಜೀನಾಮೆ ಹಿಂಪಡೆಯುವುದಿಲ್ಲ: ಮುಂಬೈನಲ್ಲಿ ಎಸ್.ಟಿ ಸೋಮಶೇಕರ್
Update: 2019-07-07 15:57 GMT
ಮುಂಬೈ, ಜು.7: ರಾಜೀನಾಮೆ ನೀಡಿದ ಯಾವುದೇ ಶಾಸಕರು ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ ಎಂದು ಎಸ್.ಟಿ ಸೋಮಶೇಕರ್ ಸ್ಪಷ್ಟಪಡಿಸಿದ್ದಾರೆ.
ಮುಂಬೈಯ ಸೋಫಿಟೆಲ್ ಹೋಟೆಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿ ಒಟ್ಟು 10 ಶಾಸಕರು ಇದ್ದಾರೆ. ರಾಮಲಿಂಗರೆಡ್ಡಿ, ಮುನಿರತ್ನ ಹಾಗೂ ಆನಂದ್ ಸಿಂಗ್ ನಾಳೆ ನಮ್ಮ ಜೊತೆ ಸೇರುತ್ತಾರೆ ಎಂದರು.
ನಾವೆಲ್ಲರೂ ರಾಜೀನಾಮೆ ಸಲ್ಲಿಸಿದ್ದೇವೆ. ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ರಾಜೀನಾಮೆ ನೀಡಿದ ನಾವೆಲ್ಲರೂ ಒಗ್ಗಟ್ಟಾಗಿದ್ದು, ಸಿಎಲ್ ಪಿ ಸಭೆಗೆ ಯಾವುದೇ ಕಾರಣಕ್ಕೂ ಹಾಜರಾಗುವುದಿಲ್ಲ ಎಂದ ಅವರು, ಸಿಎಂ ಬದಲಾವಣೆ ಮಾಡುವ ಬೇಡಿಕೆ ಇಟ್ಟಿಲ್ಲ. ಇಂತವರನ್ನೇ ಸಿಎಂ ಮಾಡಿ ಎಂದು ನಾವು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.