ಕಾರು ಪಲ್ಟಿ: ಯುವಕ ಸ್ಥಳದಲ್ಲೇ ಮೃತ್ಯು
Update: 2019-07-08 11:58 GMT
ಮಡಿಕೇರಿ, ಜು.8 : ಕಾರು ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಂಟಿಕೊಪ್ಪದ ಶಾಂತಗಿರಿ ಸಮೀಪದ ಕೂರ್ಗ್ಳ್ಳಿ ತೋಟದ ಬಳಿ ನಡೆದಿದೆ.
ಕಾರು ಚಾಲಕ ಅರವತ್ತೊಕ್ಲು ಗ್ರಾಮದ ನಿವಾಸಿ ಹರ್ಷಿತ್ ಗೌಡ (27) ಮೃತ ಯುವಕ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಜೊತೆಯಲ್ಲಿದ್ದ ಸ್ನೇಹಿತ ಸುಮಂತ ಸಣ್ಣ, ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹರ್ಷಿತ್ ಗೌಡ ತನ್ನ ತಂದೆಯನ್ನು ಅರವತ್ತೋಕ್ಲು ಗ್ರಾಮಕ್ಕೆ ಮಾರುತಿ ಕಾರಿನಲ್ಲಿ ಬಿಟ್ಟು ಸ್ನೇಹಿತ ಸುಮಂತ ಎಂಬಾತನೊಂದಿಗೆ ರವಿವಾರ ರಾತ್ರಿ ಮರಳುತ್ತಿದ್ದಾಗ ಅವಘಡ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕರಾದ ಕುಮಾರ್ ಆರಾಧ್ಯ, ಸುಂಟಿಕೊಪ್ಪದ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.