​ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2019-07-15 06:59 GMT

ಚಿಕ್ಕಮಗಳೂರು : ಜಿಲ್ಲೆಯ ಕಳಸ ಪಟ್ಟಣ ಸಮೀಪದಲ್ಲಿ ಹರಿಯುವ ಭದ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಗ್ಗೆ ವರದಿಯಾಗಿದೆ.

ಕಳಸ ಪಟ್ಟಣ ಸಮೀಪದ ಹೊರನಾಡು- ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಬಳಿ ಮೃತ ದೇಹ ಪತ್ತೆಯಾಗಿದೆ.

ಸೋಮವಾರ ಬೆಳಗ್ಗೆ ಹೆಬ್ಬಾಳೆ ಸೇತುವೆ ಬಳಿ ಸ್ಥಳೀಯರು ಭಧ್ರಾ ನದಿಯಲ್ಲಿ ಮೃತ ದೇಹ ತೇಲಿ ಬರುತ್ತಿರುವುದನ್ನು ಗಮನಿಸಿ ಕಳಸ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭದ್ರಾನದಿಯಲ್ಲಿ ಕುದುರೆಮುಖದ ಕಡೆಯಿಂದ ತೇಲಿ ಬರುತ್ತಿದ್ದ ಮೃತ ದೇಹವನ್ನು ಅಡ್ಡಹಾಕಿ ದಡಕ್ಕೆ ತಂದಿದ್ದಾರೆ.

ಕುದುರೆಮುಖ ಸುತ್ತಮುತ್ತ ರಸ್ತೆ ಬದಿಯಲ್ಲಿ ಹರಿಯುವ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದು ಅಥವಾ ನದಿ ನೋಡಲು ಹತ್ತಿರ ಹೋಗಿದ್ದಾಗ ಕಾಲು ಜಾರಿ ಬಿದ್ದು ವ್ಯಕ್ತಿ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವ್ಯಕ್ತಿಯನ್ನು ಕೊಲೆ ಮಾಡಿ ನದಿಗೆ ಎಸೆಯಲಾಗಿದೆಯೇ ?, ಆತ್ಮಹತ್ಯೆಯೇ ?, ಕಾಲು ಜಾರಿ ನದಿಗೆ ಬಿದ್ದಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News