ಹಣ್ಣು ಕೀಳಲು ಮರವೇರಿದ್ದ ಯುವಕ ವಿದ್ಯುತ್ ತಂತಿ ತಗುಲಿ ಮೃತ್ಯು

Update: 2019-07-15 12:54 GMT

ಕೊಳ್ಳೇಗಾಲ, ಜು.15: ನೇರಳೆಹಣ್ಣು ಕೀಳಲು ಮರವೇರಿದ್ದ ವಿಶೇಷ ಚೇತನ (ಮೂಕ) ಯುವಕ ವಿದ್ಯುತ್ ತಂತಿ ತಗುಲಿ ಮೃತಪಟ್ಟ ದಾರುಣ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಲಕ್ಕರಸನಪಾಳ್ಯ ಗ್ರಾಮದ ಕಾರ್ತಿಕ್(24) ಮೃತ ಯುವಕ. ಈತ ತನ್ನ ಮೂವರು ಸ್ನೇಹಿತರೊಂದಿಗೆ (ಎಲ್ಲರೂ ವಿಶೇಷ ಚೇತನರು) ಗುಂಡಾಲ್ ಜಲಾಶಯಕ್ಕೆ ತಿರುಗಾಡಲು ತೆರಳಿದ್ದನು. ವಾಪಸ್ ಬರುವಾಗ ಮಧುವನಹಳ್ಳಿ ಸಮೀಪದಲ್ಲಿ ನೇರಳೆಹಣ್ಣು ಕೀಳುವ ಸಲುವಾಗಿ ಮರವೊಂದಕ್ಕೆ ಹತ್ತಿದ್ದು, ಈ ವೇಳೆ ಮರದ ರೆಂಬೆಗಳ ಮಧ್ಯದಲ್ಲಿ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿ ತಗುಲಿದೆ. ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಂಭೀರಗೊಂಡ ಕಾರ್ತಿಕ್ನನ್ನು ಆತನ ಸ್ನೇಹಿತರು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಯುವಕ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

ಈ ಸಂಬಂಧ ಮೃತ ಯುವಕನ ತಾಯಿ ನಾಗರತ್ನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News