ಬಜೆಟ್‌ನಲ್ಲಿರುವ ಆಲೋಚನೆಗಳು ಮತ್ತು ಆದರ್ಶಗಳು

Update: 2019-07-16 18:34 GMT

ಮಾರುಕಟ್ಟೆ ಸೃಷ್ಟಿಸಿರುವ ಸಮಾನತೆಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಅಸಮಾನತೆಗಳನ್ನು ಸೃಷ್ಟಿಸುವ ರಚನೆಗಳನ್ನು ಮುಟ್ಟದೆ, ಅದರ ಪರಿಣಾಮಗಳನ್ನು ಮಾತ್ರ ಕಡಿಮೆ ಮಾಡುವ ಕ್ರಮಗಳನ್ನು ಅನುಸರಿಸುವುದು ಸರಕಾರಗಳು ಆಯ್ಕೆ ಮಾಡಿಕೊಂಡಿರುವ ಸುಲಭದ ದಾರಿಯಾಗಿದೆ. ಪರಿಹಾರ ಧನವೆಂಬ ಸಾಧನದ ಮೂಲಕ ಸರಕಾರವು ಸಂತ್ರಸ್ತರನ್ನು ಅಥವಾ ಫಲಾನುಭವಿಗಳನ್ನು ಅಳೆಯುತ್ತದೆ. ಸರಕಾರಗಳು ಪರಿಹಾರಧನದ ಅಗತ್ಯವನ್ನು ಸೃಷ್ಟಿಸುವಂಥ ಸಂದರ್ಭವನ್ನು ನಿವಾರಣೆ ಮಾಡಬೇಕು.


ಕೇಂದ್ರ ಸರಕಾರದ 2019ರ ಸಾಲಿನ ವಾರ್ಷಿಕ ಬಜೆಟ್‌ನ ಬಗ್ಗೆ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿರುವ ಹಲವಾರು ಅರ್ಥಶಾಸ್ತ್ರಜ್ಞರು ವಿಸ್ತೃತವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್‌ನಲ್ಲಿರುವ ವ್ಯಾವಹಾರಿಕ ಧೋರಣೆಯು ಕಣ್ಣಿಗೆ ರಾಚುವಂತೇ ಇದೆ. ಹಲವಾರು ವೈರುಧ್ಯಗಳನ್ನು ಹೊಂದಿರುವ ಈ ಬಜೆಟ್‌ನಲ್ಲೂ ಯಥಾಪ್ರಕಾರ ಪರಸ್ಪರ ಸಂಘರ್ಷಾತ್ಮಕ ಹಿತಾಸಕ್ತಿಗಳನ್ನು ಸರಿದೂಗಿಸಿಕೊಂಡು ಹೋಗುವ ಧೋರಣೆಯನ್ನೇ ಅನುಸರಿಸಲಾಗಿದೆ. ಎಂದಿನಂತೆ ಈ ಬಜೆಟ್ಟೂ ಸಹ ಬಡವರ ಪರವಾದ ಧೋರಣೆಯನ್ನಿಟ್ಟುಕೊಂಡು ರೂಪಿಸಲಾಗಿದೆಯೆಂದೇ ಪ್ರತಿಪಾದಿಸಲಾಗುತ್ತಿದೆ. ಆದರೆ, ಕೆಲವು ಸಾಮಾಜಿಕ ಗುಂಪುಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಧ್ಯಮವರ್ಗದವರನ್ನು ಓಲೈಸಲು ಒಂದಷ್ಟು ಸಂಪನ್ಮೂಲಗಳನ್ನು ವಿಶೇಷವಾಗಿ ಒದಗಿಸಲಾಗಿದೆ. ‘ಬಡವರು’ ಎಂಬ ವರ್ಗೀಕರಣವು ರಾಜಕೀಯವಾಗಿ ಲಾಭದಾಯಕವಲ್ಲವೆಂಬ ತಿಳುವಳಿಕೆಯನ್ನು ಪುನರ್‌ಪ್ರತಿಪಾದಿಸುವ ಈ ಬಜೆಟ್ ಆ ವರ್ಗವನ್ನು ಇನ್ನಷ್ಟು ನಿರ್ದಿಷ್ಟ ಗುಂಪುಗಳನ್ನಾಗಿ ಒಳ ವಿಭಜನೆ ಮಾಡಿದೆ. ಒಂದುಕಡೆ ಅದು ವಾರ್ಷಿಕವಾಗಿ ಎರಡು ಕೋಟಿಗಿಂತ ಹೆಚ್ಚಿನ ವರಮಾನವನ್ನು ಹೊಂದಿರುವ ಅತೀ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಆರ್ಥಿಕ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರೂ ಮತ್ತೊಂದೆಡೆ ಬಂಡವಾಳ ಹೂಡಿಕೆಯನ್ನು ಮಾಡುವಂತೆ ಕಾರ್ಪೊರೇಟ್ ವರ್ಗವನ್ನು ಓಲೈಸಲೇಬೇಕಾಗಿದೆ.

ಹಾಗೆ ನೋಡಿದರೆ ಕೇವಲ ತೆಳುವಾದ ಬಹುಮತವನ್ನು ಹೊಂದಿರುವ ಸರಕಾರ ಮಾಡುವಂತೆ ಈ ಸರಕಾರವು ಸಹ ತದ್ವಿರುದ್ಧವಾದ ಪ್ರಸ್ತಾಪಗಳನ್ನು ಮತ್ತು ಯೋಜನೆಗಳನ್ನು ಘೋಷಿಸಿರುವುದೇಕೆಂದು ಹಲವರು ಗೊಂದಲಕ್ಕೀಡಾಗಿದ್ದಾರೆ. ಅಂತಹ ಪಕ್ಷಗಳು ವಿವಿಧ ವರ್ಗ ಮತ್ತು ಸಮುದಾಯಗಳ ರಾಜಕೀಯ ಮತ್ತು ಸಾಮಾಜಿಕ ಬೇಡಿಕೆಗಳನ್ನು ಒಳಗೊಳ್ಳುವ ಒತ್ತಡದಿಂದಾಗಿ ಎಲ್ಲರನ್ನೂ ಅಲ್ಪಸ್ವಲ್ಪತೃಪ್ತಗೊಳಿಸುವ ಬಜೆಟನ್ನು ಮುಂದಿಡುತ್ತವೆ. ಈ ಕಾರಣಗಳಿಗಾಗಿಯೇ ಬಜೆಟ್ ಪ್ರಕ್ರಿಯೆಯು ಒಂದು ಸಾಮಾಜಿಕವಾಗಿ ಪ್ರಗತಿಪರವಾದ ಸ್ವಭಾವವನ್ನು ಪಡೆದುಕೊಳ್ಳುತ್ತದೆ. ಹಾಗೆಂದು ಸಂಪೂರ್ಣ ಬಹುಮತವುಳ್ಳ ಒಂದು ಸರಕಾರವು ಕ್ರಾಂತಿಕಾರಕ ಬಜೆಟನ್ನು ಮಂಡಿಸಿ ಒಂದು ಸ್ಪರ್ಧಾತ್ಮಕ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾನೇ ಹೊರುತ್ತದೆ ಎಂದು ಹೇಳಲಾಗುವುದಿಲ್ಲ. ರಾಜಕೀಯ ಪಕ್ಷಗಳು ಕೆಲವು ನಿರ್ದಿಷ್ಟ ಗುಂಪುಗಳ ರಾಜಕೀಯ ಬೆಂಬಲವು ತನಗೆ ಸದಾ ಇರುವಂತೆ ನೋಡಿಕೊಳ್ಳುವ ಒತ್ತಡಗಳನ್ನು ಎದುರಿಸುತ್ತಿರುತ್ತವೆ. ಆದ್ದರಿಂದ ಈ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳಬಹುದು. ಅದೇ ಸಮಯದಲ್ಲಿ ಬಂಡವಾಳ ಹೂಡಿಕೆ ಮತ್ತು ಕ್ರೋಡೀಕರಣಕ್ಕೆ ರಾಜಕೀಯ ಸ್ಥಿರತೆಯು ಅತ್ಯಗತ್ಯವಾದ್ದರಿಂದ ಖಾಸಗಿ ಬಂಡವಾಳ ಕ್ಷೇತ್ರಕ್ಕೆ ಅದನ್ನೂ ಸಹ ಖಾತರಿಗೊಳಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಅವಕಾಶಗಳ ಸಾಧ್ಯತೆಯನ್ನು ನಿಜಗೊಳಿಸಿಕೊಳ್ಳಲು ವಿಸ್ತೃತವಾದ ಸ್ಪರ್ಧಾತ್ಮಕ ವಲಯವನ್ನು ಒದಗಿಸುವುದನ್ನು ಆಧರಿಸಿರುವ ಉದಾರವಾದಿ ಆದರ್ಶಗಳನ್ನು ವ್ಯಾವಹಾರಿಕ ದೃಷ್ಟಿಯಿಂದ ಪರಿಗಣಿಸುವ ಕ್ರಮವಾಗಿದೆ. ಇಂತಹ ಸ್ಪರ್ಧೆಗಳು ಒಂದು ಸ್ಥರದಲ್ಲಿ ಸಮಾನತೆಯ ಪದರಗಳನ್ನು ನಿರ್ಮಿಸಿದರೂ ದಿನಗಳೆದಂತೆ ಅದು ಆಯಾ ಗುಂಪಿನೊಳಗೆ ಮತ್ತು ಗುಂಪುಗಳ ನಡುವೆ ಅಸಮಾನತೆಗಳನ್ನು ಮತ್ತೆ ಸೃಷ್ಟಿಸುವ ಸಾಧ್ಯತೆಗಳನ್ನು ಹೊಂದಿದೆ. ಹೀಗಾಗಿ ಅಂತಹ ವಲಯಗಳ ಅವಕಾಶಗಳನ್ನು ಮತ್ತು ಸಾಮಾಜಿಕ ತಳಹದಿಗಳನ್ನು ಸದಾ ವಿಸ್ತರಿಸುವ ಹಾಗೆ ನೋಡಿಕೊಳ್ಳುವ ಅಗತ್ಯವಿದೆ.

ಜನರು ತಮ್ಮ ದುರ್ಭರ ಪರಿಸ್ಥಿತಿಗಳನ್ನು ಸಾಪೇಕ್ಷವಾಗಿ ಉತ್ತಮಗೊಳಿಸಿಕೊಳ್ಳುವ ಅವಕಾಶಗಳನ್ನು ಹೇಗೆ ಕಲ್ಪಿಸಬಲ್ಲದು ಎಂಬುದರಲ್ಲೇ ಒಂದು ಸರಕಾರದ ನೀತಿಗಳ ಕ್ರಾಂತಿಕಾರತೆಯು ಅಡಗಿರುತ್ತದೆ. ಆದರೆ ಭಾರತದ ಆರ್ಥಿಕತೆಯು ಅಂತಹ ವಲಯವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಭಾರತದ ಶೇ.93ರಷ್ಟು ಉದ್ಯೋಗವು ಇನ್ನೂ ಅಸಂಘಟಿತ ಕ್ಷೇತ್ರದಲ್ಲೇ ಇರುವುದು ಒಂದು ಪುರಾವೆಯಾಗಿದೆ. ಸರಕಾರ ಮತ್ತು ಮಾರುಕಟ್ಟೆಗಳು ಹೊಸ ಸ್ಪರ್ಧಾತ್ಮಕ ವಲಯವನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿರುವುದರಿಂದಲೇ ಜನರನ್ನು ಸಿವಿಲ್ ಸರ್ವಿಸ್, ವೃತ್ತಿಪರ ಕೋರ್ಸುಗಳು ಮತ್ತು ಅಳಿದುಳಿದಿರಬಹುದಾದ ಸರಕಾರಿ ಉದ್ಯೋಗಗಳಿಗೆ ಮೊರೆಹೋಗುವಂತೆ ಮಾಡುತ್ತದೆ. ಆದರೆ ಆ ವಲಯದಲ್ಲಿ ಕೆಲವೇ ಕೆಲವರು ಮಾತ್ರ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎನ್ನುವುದು ಸ್ಪಷ್ಟ. ಮೀಸಲಾತಿಯಲ್ಲಿ ತಮ್ಮ ತಮ್ಮ ಖೋಟಾಗಳಿಗಾಗಿ ಹೆಚ್ಚುತ್ತಿರುವ ಒತ್ತಡವು ಸ್ಪರ್ಧಾತ್ಮಕ ಅವಕಾಶದ ಆದರ್ಶವು ಎಷ್ಟು ಏಕಪಕ್ಷೀಯವಾಗಿದೆಯೆನ್ನುವುದನ್ನು ರುಜುವಾತು ಮಾಡುತ್ತದೆ. ಜನರ ಜೀವನದಲ್ಲಿ ಎಲ್ಲಾ ಸ್ಥರಗಳಲ್ಲೂ ಅಸಮಾನತೆಯನ್ನು ಉತ್ಪಾದಿಸುವುದು ಮಾರುಕಟ್ಟೆಯೇ ಎಂಬುದು ನಿರ್ವಿವಾದ. ಆದರೆ ಒಂದು ಅಸಮಾನತೆಯನ್ನು ಆಧರಿಸಿದ ವ್ಯವಸ್ಥೆ ಮತ್ತು ಪ್ರಕ್ರಿಯೆಗಳ ಚೌಕಟ್ಟು ಗಟ್ಟಿಯಾಗಿರುವಾಗ ಒಂದು ಬಲಿಷ್ಠ ಸರಕಾರಕ್ಕೂ ಸಹ ಅಸಮಾನತೆಗಳನ್ನು ನಿವಾರಿಸುವುದು ಕಷ್ಟಸಾಧ್ಯವಾಗುತ್ತದೆ. ಅದು ನಿವಾರಿಸಬೇಕಿರುವುದು ತಾನು ಸೃಷ್ಟಿ ಮಾಡಿದ ಅಸಮಾನತೆಗಳನ್ನಲ್ಲ.

ಬದಲಿಗೆ ಮಾರುಕಟ್ಟೆ ಸೃಷ್ಟಿ ಮಾಡಿದ ಅಸಮಾನತೆಗಳನ್ನು. ಪ್ರಶ್ನೆಯೇನೆಂದರೆ ಸರಕಾರವೊಂದು ಮಾರುಕಟ್ಟೆ ಸೃಷ್ಟಿಸಿರುವ ಸಮಾನತೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದು. ಅದರಲ್ಲಿ ಖೋಟಾಗಳನ್ನು ವಿಸ್ತರಿಸುವುದು ಒಂದು ಮಾರ್ಗ. ಬೆಳೆ ವೈಫಲ್ಯದಂತಹ ವೈಪರೀತ್ಯಗಳನ್ನು ಎದುರಿಸಲು ರೈತರಿಗೆ ನೀಡಲಾಗುವ ಬೆಳೆ ವಿಮೆಯಂತಹ ಕ್ರಮಗಳು ಅಂತಿಮವಾಗಿ ವಿಮಾ ಕಂಪೆನಿಗಳಿಗೆ ಮಾತ್ರ ಸಹಾಯ ಮಾಡುತ್ತದೆ. ಅಂತಹ ವಿಮಾ ಯೋಜನೆಗಳು ಎಂದೂ ರೈತರಿಗೆ ಸಹಾಯವನ್ನು ಮಾಡಿಲ್ಲ. ಸಹಾಯ ಧನಗಳು ಅಸಮಾನತೆಯನ್ನು ಎಂದಿಗೂ ನಿವಾರಿಸಲಾರವು. ವಾಸ್ತವವಾಗಿ ಅಂತಹ ಕ್ರಮಗಳು ಹೆಚ್ಚೆಂದರೆ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಎದುರಿಸಲು ಸಹಾಯ ಮಾಡಬಹುದಷ್ಟೆ. ಮಾರುಕಟ್ಟೆ ಸೃಷ್ಟಿಸಿರುವ ಸಮಾನತೆಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಅಸಮಾನತೆಗಳನ್ನು ಸೃಷ್ಟಿಸುವ ರಚನೆಗಳನ್ನು ಮುಟ್ಟದೆ, ಅದರ ಪರಿಣಾಮಗಳನ್ನು ಮಾತ್ರ ಕಡಿಮೆ ಮಾಡುವ ಕ್ರಮಗಳನ್ನು ಅನುಸರಿಸುವುದು ಸರಕಾರಗಳು ಆಯ್ಕೆ ಮಾಡಿಕೊಂಡಿರುವ ಸುಲಭದ ದಾರಿಯಾಗಿದೆ. ಪರಿಹಾರ ಧನವೆಂಬ ಸಾಧನದ ಮೂಲಕ ಸರಕಾರವು ಸಂತ್ರಸ್ತರನ್ನು ಅಥವಾ ಫಲಾನುಭವಿಗಳನ್ನು ಅಳೆಯುತ್ತದೆ. ಸರಕಾರಗಳು ಪರಿಹಾರಧನದ ಅಗತ್ಯವನ್ನು ಸೃಷ್ಟಿಸುವಂಥ ಸಂದರ್ಭವನ್ನು ನಿವಾರಣೆ ಮಾಡಬೇಕು. ಉದಾಹರಣೆಗೆ ಸರಕಾರವು ರೈತರು ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿರ್ಮೂಲನೆ ಮಾಡಬೇಕು. ಹಾಗೆ ನೋಡಿದಲ್ಲಿ ಪರಿಹಾರ ಧನವೆಂಬುದು ಅದರ ಅಗತ್ಯವನ್ನು ಸೃಷ್ಟಿಸುವ ಸಂದರ್ಭವನ್ನು ನಿವಾರಣೆ ಮಾಡುವಲ್ಲಿನ ಸರಕಾರದ ವೈಫಲ್ಯದ ಸಂಕೇತವೇ ಆಗಿದೆ. ಬೇರೆ ಎಲ್ಲಾ ಕ್ರಮಗಳ ಜೊತೆಜೊತೆಗೆ ಈ ಬಜೆಟ್ ಒಂದು ಆಕರ್ಷಕವಾದ ಮತ್ತು ನಿರೀಕ್ಷಿತ ಸ್ಪರ್ಧಾತ್ಮಕ ಅವಕಾಶಗಳನ್ನು ವಿಸ್ತರಿಸುವಂಥ ಉದಾರವಾದಿ ಆದರ್ಶಗಳ ಪರಿಸ್ಥಿತಿಯನ್ನು ನಿರ್ಮಿಸುವ ತನ್ನ ಕರ್ತವ್ಯವನ್ನು ಮುಂದೂಡುವ ತನ್ನ ಉದ್ದೇಶಗಳಿಗೆ ಪೂರಕವಾಗಿ ಈ ಪರಿಹಾರಧನವೆಂಬ ಪರಿಕಲ್ಪನೆಯನ್ನು ದುಡಿಸಿಕೊಳ್ಳುತ್ತಿದೆ.


ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News