ಕೆರೆಗೆ ಮೀನು ಹಿಡಿಯಲು ಹೋದ ಮೂವರು ಯುವಕರು ನೀರುಪಾಲು

Update: 2019-07-21 12:34 GMT

ಶಿವಮೊಗ್ಗ, ಜು. 21: ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಹೋಬಳಿಯ ಜೋಳದ ಗುಡ್ಡ ಗ್ರಾಮದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋದ ಮೂವರು ತರುಣರು ನೀರುಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಪ್ರದೀಪ್ (19), ಶರತ್ (15) ಹಾಗೂ ಕಾರ್ತಿಕ್ (17) ಮೃತಪಟ್ಟವರೆಂದು ಗುರುತಿಸಲಾಗಿದೆ. ಈ ಮೂವರು ಸ್ನೇಹಿತರಾಗಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗ್ರಾಮದ ಹೊಸ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಇವರ ಜೊತೆಯಲ್ಲಿ ಹೋಗಿದ್ದ ಅಭೀಷೇಕ್ ದಡದಲ್ಲಿಯೇ ನಿಂತುಕೊಂಡಿದ್ದು, ಕೆರೆಗಿಳಿದಿದ್ದ ಮೂವರು ಮುಳುಗುತ್ತಿರುವುದನ್ನು ಕಂಡು ಜೋರಾಗಿ ಕೂಗಿದಾಗ ಅಲ್ಲಿಯೇ ಇದ್ದ ಗ್ರಾಮಸ್ಥರು ಆಗಮಿಸಿದ್ದು, ಆದರೆ ಮುಳುಗುತ್ತಿರುವವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು  ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News