‘ಶಾಸಕ ಶ್ರೀಮಂತ್ ಪಾಟೀಲ್ ದಾಖಲಾಗಿರುವ ಆಸ್ಪತ್ರೆಯಲ್ಲಿ ಹೃದ್ರೋಗ ಘಟಕವೇ ಇಲ್ಲ’
Update: 2019-07-23 18:42 GMT
ಬೆಂಗಳೂರು, ಜು. 23: ‘ಹೃದಯ ಬೇನೆ ಸಮಸ್ಯೆಯಿಂದ ಮುಂಬೈನಲ್ಲಿ ಶಾಸಕ ಶ್ರೀಮಂತ್ ಪಾಟೀಲ್ ದಾಖಲಾಗಿರುವ ಆಸ್ಪತ್ರೆಯಲ್ಲಿ ಹೃದ್ರೋಗ ಘಟಕವೆ ಇಲ್ಲ’ ಎಂದ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್, ಕೂಡಲೇ ಅವರನ್ನು ಬೆಂಗಳೂರಿಗೆ ಕರೆಸಬೇಕು ಎಂದು ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲೆ ಸಚಿವ ಖಾದರ್ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ನಾನು ವೈದ್ಯನಾಗಿದ್ದು, ಮುಂಬೈನಲ್ಲಿರುವ ನನ್ನ ಸ್ನೇಹಿತರಿಂದ ಮಾಹಿತಿ ಪಡೆದಿದ್ದೇನೆ. ಶ್ರೀಮಂತ್ ಪಾಟೀಲ್ ದಾಖಲಾಗಿರುವ ಆಸ್ಪತ್ರೆಯಲ್ಲಿ ಹೃದ್ರೋಗ ಘಟಕವೆ ಇಲ್ಲ ಎಂದರು.
ಬೆಂಗಳೂರು ನಗರದಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ಹೃದ್ರೋಗ ಆಸ್ಪತ್ರೆಗಳಿವೆ. ಅವರಿಗೆ ಸೂಕ್ತ ಭದ್ರತೆ ಕಲ್ಪಿಸಿ, ಕೂಡಲೇ ಅವರನ್ನು ಬೆಂಗಳೂರಿಗೆ ಕರೆಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಡಾ.ರಂಗನಾಥ್ ಆಗ್ರಹಿಸಿದರು. ಅಲ್ಲದೆ, ಸುಳ್ಳು ಮಾಹಿತಿ ನೀಡಿ ನಮ್ಮ ಪಕ್ಷದ ಶ್ರೀಮಂತ್ ಪಾಟೀಲ್ ಅವರನ್ನು ಕರೆದೊಯ್ಯಲಾಗಿದೆ ಎಂದು ದೂರಿದರು.