ಗಂಡನ ಆಸ್ತಿಗಾಗಿ ಅಲೆದಾಡಿ ಬೇಸತ್ತ ವಿಧವೆ ಆತ್ಮಹತ್ಯೆ

Update: 2019-07-30 18:37 GMT

ಮೈಸೂರು,ಜು.30: ಗಂಡನ ಆಸ್ತಿಗಾಗಿ ಅಲೆದಾಡಿ ಬೇಸತ್ತ ವಿಧವೆಯೋರ್ವರು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿದೆ.

ಮೈಸೂರಿನ ಉದಯಗಿರಿಯ ಕಲ್ಯಾಣಗಿರಿ ನಗರದಲ್ಲಿ ಈ ಘಟನೆ ನಡೆದಿದ್ದು, ಶಬರೀನ್ ಬಾನು(31) ನೇಣಿಗೆ ಶರಣಾದವರಾಗಿದ್ದಾರೆ. 15 ವರ್ಷಗಳ ಹಿಂದೆ ಸೈಯದ್ ಅಜಮದ್ ಆಲಿ ಎಂಬಾತನನ್ನು ಶಬರೀನ್ ಬಾನು ಮದುವೆ ಆಗಿದ್ದರು. ಆದರೆ ಸೈಯದ್ ಅಜಮದ್ ಆಲಿ ಕಳೆದ 8 ವರ್ಷದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ನಡುವೆ ಪತಿ ಸಾವನ್ನಪ್ಪಿದ ನಂತರ ಕೆಲಸಕ್ಕಾಗಿ ಶಬರೀನ್ ಬಾನು ದುಬೈಗೆ ತೆರಳಿದ್ದರು. ದುಬೈನಲ್ಲಿ ಮೂರು ವರ್ಷ ಕೆಲಸ ಮಾಡಿ ಮೂರು ವರ್ಷದ ಹಿಂದೆ ತಾಯ್ನಾಡಿಗೆ ಶಬರೀನ್ ಬಾನು ವಾಪಾಸ್ ಬಂದಿದ್ದರು ಎನ್ನಲಾಗಿದೆ.

ಶಬರೀನ್ ಬಾನುಗೆ ಬೆಂಗಳೂರಿನ ಯಶವಂತಪುರದಲ್ಲಿ ಗಂಡನಿಗೆ ಸೇರಿದ ಆಸ್ತಿ ಇದೆ. ಗಂಡನ ಆಸ್ತಿಗಾಗಿ ಅಲೆದಾಡಿ ಶಬರೀನ್ ಬಾನು ಬೇಸತ್ತಿದ್ದರು. ಜತೆಗೆ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೀವ್ರ ಸಂಕಷ್ಟ ಎದುರಿಸಿದ್ದರು. ಹೀಗಾಗಿ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗದ ಹಿನ್ನಲೆ ನಿನ್ನೆ ತಡರಾತ್ರಿ ಶಬರೀನ್ ಬಾನು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News