ಚಿಕ್ಕಮಗಳೂರು ಜಿಲ್ಲೆಯಲ್ಲಿ 110 ಡೆಂಗ್ ಪ್ರಕರಣ ಪತ್ತೆ

Update: 2019-07-30 18:59 GMT

ಚಿಕ್ಕಮಗಳೂರು, ಜು.30: ಜಿಲ್ಲಾದ್ಯಂತ 110 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, 20 ಚಿಕುನ್‍ಗುನ್ಯ ಪ್ರಕರಣಗಳು ಕಂಡು ಬಂದಿವೆ. ಆದರೆ ಈ ಪೈಕಿ ಯಾರೂ ಮೃತಪಟ್ಟಿಲ್ಲ. ಸಕಾಲದಲ್ಲಿ ಚಿಕುನ್ ಗುನ್ಯಾ, ಡೆಂಗ್ ಪೀಡಿತರಿಗೆ ಅಗತ್ಯ ಚಿಕಿತ್ಸೆಗಳನ್ನು ಕೈಗೊಂಡಿದ್ದರ ಪರಿಣಾಮ ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ರೋಗಗಳ ನಿಯಂತ್ರಣಕ್ಕೆ ಚಿಕಿತ್ಸೆಗಿಂತ ಜನಜಾಗೃತರಾಗುವುದು ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಚಕ್ಷಣಾಧಿಕಾರಿ ಅಧಿಕಾರಿ ಡಾ.ಮಂಜುನಾಥ್ ತಿಳಿಸಿದರು. 

ಮಂಗಳವಾರ ನಗರದ ಪ್ರೆಸ್‍ಕ್ಲಬ್ ಆವರಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಡೆಂಗ್, ಚಿಕುನ್‍ಗುನ್ಯ, ಮಲೇರಿಯಾ ನಿಯಂತ್ರಣದ ಬಗ್ಗೆ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2018ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 78 ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದವು. 2019ರಲ್ಲಿ 110 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಸಾಲಿನಲ್ಲಿ 32 ಚಿಕನ್‍ಗುನ್ಯ ಪ್ರಕರಣಗಳು ಪತ್ತೆಯಾಗಿದ್ದು, ಈ ಬಾರಿ 20 ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿಸಿದರು. 

ಡೆಂಗ್ ಮಾರಣಾಂತಿಕ ರೋಗವಾಗಿದೆ. ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವಾಗಿದೆ. ಆದರೆ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ತತ್ತಿ ಮಾಡುವ ಲಾರ್ವಗಳ ಬಗ್ಗೆ ಜನರು ಜಾಗೃತರಾದಲ್ಲಿ ಈ ರೋಗವನ್ನೇ ಇಲ್ಲವಾಗಿಸಲು ಸಾಧ್ಯವಿದೆ ಎಂದ ಅವರು, ಈ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಡೆಂಗ್ ಜ್ವರಕ್ಕೆ ಕಾರಣವಾಗುವ ಸೊಳ್ಳೆ ಶುದ್ಧ ನೀರಿನಲ್ಲಿ ಲಾರ್ವ ಇಡುತ್ತವೆ. ಈ ಲಾರ್ವ ನಾಶಕ್ಕೆ ಇಲಾಖೆ ವತಿಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇದುವರೆಗೂ 12,06,977 ಮನೆಗಳಲ್ಲಿ 60,40,090 ತಾಣಗಳಲ್ಲಿ ಲಾರ್ವ ಸಮೀಕ್ಷೆ ನಡೆಸಲಾಗಿದೆ. 25,706 ಮನೆಗಳ ಪೈಕಿ 30,253 ತಾಣಗಳಲ್ಲಿ ಲಾರ್ವ ಕಂಡು ಬಂದಿದೆ. ಈ  ಲಾರ್ವ ನಿರ್ಮೂಲನೆ ಮಾಡಲಾಗಿದ್ದು, ಲಾರ್ವ ಸಮೀಕ್ಷೆ ಮತ್ತು ನಿರ್ಮೂಲನಾ ಕಾರ್ಯ ಮುಂದುವರಿದಿದೆ ಎಂದರು. ಎಂದರು.

ಡೆಂಗ್ ಹಾಗೂ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಚೌಕಟ್ಟು ಕಾರ್ಯಕ್ರಮದಡಿಯಲ್ಲಿ 2020ರೊಳಗೆ ರಾಜ್ಯಾದ್ಯಂತ ಮಲೇರಿಯಾ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು, ಇದರ ಅನ್ವಯ ಜಿಲ್ಲೆಯಲ್ಲಿ ಸಮಸ್ಯಾತ್ಮಕ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರಗಳಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಿ ನಿಯಂತ್ರಿಸಲಾಗುತ್ತಿದೆ ಎಂದರು.

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ನಗರಸಭೆ ಹಾಗೂ ಪಟ್ಟಣ ಪಂಚಾಯತ್ ನಿಂದ ಫಾಗಿಂಗ್ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ ಮುಂಜಾಗ್ರತೆ ವಹಿಸಬೇಕು. ಡೆಂಗ್ ಜ್ವರಕ್ಕೆ ಸಂಬಂಧಿಸಿದ ಸೊಳ್ಳೆಗಳು ಶುದ್ಧನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಮನೆಗಳಲ್ಲಿ ಸಂಗ್ರಹಿಸಿರುವ ನೀರನ್ನು ಮೂರು ದಿನಗಳಿಗೊಮ್ಮೆ ಬದಲಾಯಿಸಬೇಕು. ಇದರಿಂದ ಸೊಳ್ಳೆಗಳ ಉತ್ಪತಿ ತಡೆ ಸಾಧ್ಯವಾಗುವುದರೊಂದಿಗೆ ಡೆಂಗ್ ಜ್ವರ ನಿಯಂತ್ರಣ ಸಾಧ್ಯವಾಗಲಿದೆ ಎಂದರು. 

ಪ್ರೆಸ್‍ಕ್ಲಬ್ ಅಧ್ಯಕ್ಷ ಆರಗ ರವಿ ಮಾತನಾಡಿ, ಆರೋಗ್ಯ ಎಲ್ಲಾರಿಗೂ ಮುಖ್ಯ,  ನಮ್ಮ ಆರೋಗ್ಯವನ್ನು ಕಾಪಾಡುವುದು ಕೇವಲ ಆರೋಗ್ಯ ಇಲಾಖೆ ಜವಬ್ದಾರಿ ಮಾತ್ರವಲ್ಲ, ಅದು ನಮ್ಮ ಜವಬ್ದಾರಿಯೂ ಕೂಡ ಹೌದು. ಸಾಂಕ್ರಮಿಕ ರೋಗದಿಂದ ದೂರಾಗಲು ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಮುಖ್ಯಪಾತ್ರ ವಹಿಸುತ್ತೀವೆ. ಆರೋಗ್ಯ ಇಲಾಕೆಯ ಜೊತೆ ಜೊತೆಗೆ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ರೋಗಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಸಂವಾದ ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವರದಿಗಾರರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಂವಾದ ಕಾರ್ಯಕ್ರಮದಲ್ಲಿ ಡಿವಿಬಿಡಿಸಿ ಅಧಿಕಾರಿ ಡಾ. ಹರೀಶ್‍ಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಈಶ್ವರಪ್ಪ, ಸುಭಾಷ್, ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಲಕ್ಷ್ಮೀಪ್ರಸಾದ್, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಕಿಶೋರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News