‘ಶತಮಾನದ ಸಂತ’ನ ಕುರಿತು ಇನ್ನಷ್ಟು....

Update: 2019-08-04 18:31 GMT

ಬಗೆದಷ್ಟೂ ಉಕ್ಕುವ, ಬರೆದಷ್ಟು ಮುಗಿಯದ ವ್ಯಕ್ತಿತ್ವ ದಿವಂಗತ ಶ್ರೀ ಶಿವಕುಮಾರ ಸ್ವಾಮಿಗಳದು. ಲಿಂಗಾಯತ ಧರ್ಮದ ಸಂದೇಶವನ್ನು ಸೇವೆಯ ರೂಪದಲ್ಲಿ ಹರಡಿ, ನಾಡು ಮಾತ್ರವಲ್ಲ, ದೇಶದ ಉದ್ದಗಲಕ್ಕೆ ವಿಸ್ತರಿಸಿದವರು. ಈಗಾಗಲೇ ಇವರ ಕುರಿತಂತೆ ಕೃತಿಗಳು, ಲೇಖನಗಳು ಹಲವು ಬಂದಿವೆ. ಅವುಗಳ ಸಾಲಿನಲ್ಲಿ ಸೇರಬಹುದಾದ ಇನ್ನೊಂದು ಕೃತಿ ನೇ. ಭ. ರಾಮಲಿಂಗ ಶೆಟ್ಟಿ ಅವರು ಸಂಪಾದಿಸಿರುವ ‘ಶತಮಾನದ ಸಂತ’. ಹಲವು ಹಿರಿಯರು, ಲೇಖಕರು ಬರೆದಿರುವ ಲೇಖನಗಳನ್ನು ಒಂದೆಡೆ ಸೇರಿಸುವ ಕೆಲಸವನ್ನು ರಾಮಲಿಂಗ ಶೆಟ್ಟಿ ಅವರು ಮಾಡಿದ್ದಾರೆ. ಇಲ್ಲಿರುವ ಹಲವು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಗೊಂಡವುಗಳು.

‘ಶತಮಾನದ ಸಂತ’ ಕೃತಿಯಲ್ಲಿ ಒಟ್ಟು 80 ಲೇಖನಗಳಿವೆ. ಮಲ್ಲೇಪುರಂ ಜಿ. ವೆಂಕಟೇಶ್, ಕುಂ. ವೀರಭದ್ರಪ್ಪ, ಜಿ. ಎಸ್. ಶಿವರುದ್ರಪ್ಪ, ಗೊ.ರು. ಚನ್ನಬಸಪ್ಪ, ಡಾ. ಎಂ. ಚಿದಾನಂದ ಮೂರ್ತಿ, ರಂಜಾನ್ ದರ್ಗಾ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ರಂ.ಶ್ರೀ. ಮುಗಳಿ, ಡಾ. ವೀರೇಂದ್ರ ಹೆಗ್ಗಡೆ, ಡಾ. ಕವಿತಾ ಕೃಷ್ಣ, ಡಾ. . ಯು. ಬಿ. ರಾಜಲಕ್ಷ್ಮೀ, ಕೆ. ಎಸ್. ಈಶ್ವರಪ್ಪರಂತಹ ಖ್ಯಾತ ಲೇಖಕರ ಲೇಖನಗಳಿರುವುದೇ ಈ ಕೃತಿಯ ಹಿರಿಮೆಯನ್ನು ಹೇಳುತ್ತದೆ.

‘ಕಾರುಣ್ಯದ ನಿಧಿ, ಕಲ್ಯಾಣದ ಪ್ರತಿರೂಪ’ ಲೇಖನದಲ್ಲಿ ಕುಂ. ವೀರಭದ್ರಪ್ಪ ಅವರು, ಮಠಕ್ಕೂ ಶಿಕ್ಷಕರಿಗೂ ಇರುವ ನಂಟನ್ನು ಹೇಳುತ್ತಾರೆ. ನಾಡಿನ ಬಹುಪಾಲು ಪ್ರಾಥಮಿಕ ಶಾಲಾ ಶಿಕ್ಷಕರು ಮಠದ ಕೊಡುಗೆ ಎನ್ನುವುದನ್ನು ಅವರು ಉಲ್ಲೇಖಿಸುತ್ತಾರೆ. ಸ್ವತಃ ಕುಂವೀ ಅವರೂ ಮಠದ ಹಳೆ ವಿದ್ಯಾರ್ಥಿಗಳಲ್ಲಿ ಒಬ್ಬರು ಎನ್ನುವುದು ಇಲ್ಲಿ ಮುಖ್ಯವಾದುದು. ಶ್ರೀಗಳ ಕುರಿತಂತೆ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ಬರೆಯುತ್ತಾ, ತನ್ನ ವಿದ್ಯಾರ್ಥಿ ಬದುಕು ಹೇಗೆ ಈ ಮಠದಲ್ಲಿ ಅರಳಿತು ಎನ್ನುವುದನ್ನು ವಿವರಿಸುತ್ತಾರೆ. ‘‘ಬಡತನ ಹಾಗೂ ಅನಕ್ಷರತೆಯಿಂದಾಗಿ ಅವಕಾಶಹೀನರಲ್ಲಿ ಒಬ್ಬನಾಗಿದ್ದ ನಾನು, ನನ್ನಂಥ ಎಷ್ಟೋ ಜನ ಈ ಹೊತ್ತು ತಲೆಯೆತ್ತಿಕೊಂಡು ದಿಟ್ಟತನದಿಂದ ಬದುಕಲು ಸಾಧ್ಯವಾಗಿರುವುದು ಅಂದು ನನಗೆ ಈ ಶ್ರೀಕ್ಷೇತ್ರ ಒದಗಿಸಿದ ಅಶನ ವಸತಿಗಳ ಆಶ್ರಮದಿಂದಲೇ. ಅಂದು ಇಂದಿನ ಹಾಗೆ, ಒಂದೊಂದು ಜಾತಿ-ಮತಗಳಿಗೊಬ್ಬೊಬ್ಬ ಜಗದ್ಗುರುಗಳಿರಲಿಲ್ಲ. ಇಂದಿನ ಹಾಗೆ ಬಹುಸಂಖ್ಯೆ ಶಿಕ್ಷಣದ ವ್ಯಾಪಾರ ಸಂಸ್ಥೆಗಳೂ ಇರಲಿಲ್ಲ. ಸನಾತನ ಧರ್ಮವನ್ನು ಸಂರಕ್ಷಿಸಿಕೊಂಡು ಬರುವುದರಲ್ಲಿಯೇ ಬಹುಮಟ್ಟಿಗೆ ತೃಪ್ತವಾದ ಮೇಲ್ವರ್ಗದ ಮಠಗಳನ್ನು ಹೊರತು ಪಡಿಸಿದರೆ, ನಿಜವಾಗಿಯೂ ಸಾಮಾಜಿಕ ಕಾಳಜಿಗಳಿಂದ ತುಡಿಯುತ್ತಾ ಬಹುಜನರ ಹಿತವನ್ನು ಗುರಿಯಾಗಿಸಿಕೊಂಡ ಕೆಲವು ಮಠಗಳಿದ್ದದ್ದು-ಶರಣಧರ್ಮದವರಲ್ಲೇ. ಅವುಗಳಲ್ಲೆಲ್ಲ ಸಿದ್ದಗಂಗೆಯ ಮಠ ಮಾರ್ಗದರ್ಶಕ ಸ್ಥಾನದಲ್ಲಿತ್ತು’’ ಎಂದು ತಿಳಿಸುತ್ತಾರೆ. ಸಿದ್ದಗಂಗಾ ಮಠದ ಮತ್ತು ಸ್ವಾಮೀಜಿಗಳ ವ್ಯಕ್ತಿತ್ವವನ್ನು, ಸೇವೆಯನ್ನು ಬೇರೆ ಬೇರೆ ನೆಲೆಗಳಲ್ಲಿ ನೋಡಿದ ಮಹತ್ವದ ಲೇಖನಗಳು ಈ ಕೃತಿಯಲ್ಲಿವೆ.

ಸ್ನೇಹ ಬುಕ್ ಹೌಸ್ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 208 ಪುಟಗಳ ಈ ಕೃತಿಯ ಮುಖಬೆಲೆ 160 ರೂಪಾಯಿ. ಆಸಕ್ತರು98450 31335 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News