ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರಕ್ಕೆ ಇನ್ಫೋಸಿಸ್‌ನಿಂದ 10 ಕೋಟಿ ರೂ. ನೆರವು

Update: 2019-08-08 15:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 8: ಉತ್ತರ ಕರ್ನಾಟಕ ಹಾಗೂ ಕರಾವಳಿಯ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿರುವ ಇನ್ಫೋಸಿಸ್ ಫೌಂಡೇಷನ್, ಪ್ರವಾಹ ಪರಿಹಾರ ಕಾರ್ಯಕ್ಕೆ 10 ಕೋಟಿ ರೂ.ನೆರವು ನೀಡಲಾಗುವುದು ಎಂದು ಘೋಷಿಸಿದೆ.

ಈಗಾಗಲೇ ರಾಯಚೂರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಫೌಂಡೇಶನ್ ಪರಿಹಾರ ಕಾರ್ಯಗಳನ್ನು ಆರಂಭಿಸಿದ್ದು, ಉಳಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಯಂಸೇವಕರೊಂದಿಗೆ ಹಂತ-ಹಂತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿದೆ.

ಕುಡಿಯುವ ನೀರು, ಆಹಾರ ಉತ್ಪನ್ನಗಳು, ಬಟ್ಟೆ ಮತ್ತು ವೈದ್ಯಕೀಯ ಕಿಟ್‌ಗಳು ಸೇರಿದಂತೆ ಪ್ರವಾಹಪೀಡಿತ ಪ್ರದೇಶಗಳ ಜನರ ಅಗತ್ಯ ವಸ್ತುಗಳನ್ನು ವಿತರಣೆ ಕಾರ್ಯವನ್ನು ಫೌಂಡೇಶನ್ ಈಗಾಗಲೇ ಆರಂಭಿಸಿದೆ. ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿದೆ.

ರಸ್ತೆ, ರೈಲು ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಅಗತ್ಯ ಇರುವೆಡೆ ಪರಿಹಾರ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ. ಪ್ರಕೃತಿ ವಿಕೋಪಗಳಿಗೆ ತುತ್ತಾದ ಜನರಿಗೆ ನೆರವಾಗುತ್ತಾ ಬಂದಿದೆ ಎಂದು ಫೌಂಡೇಷನ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News