ಗುಂಡ್ಲುಪೇಟೆ: ಗುಂಡಿಕ್ಕಿಕೊಂಡು ಒಂದೇ ಕುಟುಂಬದ ಐವರು ಆತ್ಮಹತ್ಯೆ

Update: 2019-08-16 05:43 GMT

ಗುಂಡ್ಲುಪೇಟೆ, ಆ.16: ಒಂದೇ ಕುಟುಂಬದ ಐವರು ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಘಟನೆ ಗುಂಡ್ಲುಪೇಟೆ ನಗರದ ಖಾಸಗಿ ಸ್ಕೂಲ್ ಬಳಿಯ ಜಮೀನೊಂದರಲ್ಲಿ ಇಂದು ಮುಂಜಾನೆ ನಡೆದಿದೆ.

 ಮೃತರನ್ನು ಪ್ರಸಕ್ತ ಮೈಸೂರು ನಿವಾಸಿಗಳಾಗಿದ್ದ ನಾಗರಾಜ ಭಟ್ಟಾಚಾರ್ಯ (70), ಅವರ ಪತ್ನಿ ಹೇಮಲತಾ(60), ಪುತ್ರ ಓಂಕಾರ ಪ್ರಸಾದ್(38) ಅವರ ಪತ್ನಿ ನಿಖಿತಾ (28) ಮತ್ತು ಪುತ್ರ ಆರ್ಯನ್(5) ಎಂದು ಗುರುತಿಸಲಾಗಿದೆ. ಮೂಲತಃ ಇವರು ತುಮಕೂರಿನವರಾಗಿದ್ದು, ಮೈಸೂರಿನ ದಟ್ಟಗಳ್ಳಿಯಲ್ಲಿ ವಾಸವಿದ್ದರು. 

ಓಂಕಾರ್ ಪ್ರಸಾದ್ ಪತ್ನಿ ನಿಖಿತಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ 3:30ರಿಂದ 4 ಗಂಟೆಯೊಳಗೆ ಈ ಕೃತ ನಡೆದಿದೆ ಎಂದು ತಿಳಿದುಬಂದಿದ್ದು, ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಇವರು ಕುಟುಂಬ ಸಹಿತ ನಿನ್ನೆ ಗುಂಡ್ಲುಪೇಟೆಗೆ ಆಗಮಿಸಿ ಇಲ್ಲಿನ ಲಾಡ್ಜ್ ವೊಂದರಲ್ಲಿ ರೂಂ ಬಾಡಿಗೆಗೆ ಪಡೆದುಕೊಂಡಿದ್ದರು.

ನಾಗರಾಜ ಹಾಗೂ ಓಂಕಾರ ಪ್ರಸಾದ್ ಮೈಸೂರಿನಲ್ಲಿ ಡಾಟಾಬೇಸ್ ಕಂಪನಿ ನಡೆಸುತ್ತಿದ್ದು, ಕಳೆದೆರಡು ವರ್ಷಗಳಿಂದ ತೀವ್ರ ಆರ್ಥಿಕ ಅಡಚಣೆಗೆ ಒಳಗಾಗಿದ್ದರೆನ್ನಲಾಗಿದೆ. ಇದರಿಂದ ಅವರು ಸಾಲದ ಸುಳಿಗೆ ಸಿಲುಕಿದ್ದರೆನ್ನಲಾಗಿದೆ.

ಮೇಲ್ನೋಟಕ್ಕೆ ಮೊದಲಿಗೆ ತಂದೆ ಹಾಗೂ ಮಗನ ಹಣೆಗೆ ಗುಂಡಿಕ್ಕಿ ಬಳಿಕ ತಾಯಿ ಹಾಗೂ ಪತ್ನಿಗೆ ಗುಂಡು ಹಾರಿಸಿ ಹತ್ಯೆಗೈದು ಕೊನೆಗೆ ಓಂಕಾರ ಪ್ರಸಾದ್ ಸ್ವತಃ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ ಎಂದು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು  ಆನಂದ ಕುಮಾರ್ ಮಾಹತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News