ಪರಿಹಾರ ಕೇಂದ್ರಗಳಿಂದ ಮನೆಗಳಿಗೆ ವಾಪಸ್ ಹೋಗುವವರಿಗೆ ವಿಶೇಷ ಪಡಿತರ ಕಿಟ್ ವಿತರಣೆ

Update: 2019-08-16 14:05 GMT

ಬೆಳಗಾವಿ, ಆ.16: ಅತ್ಯಧಿಕ ಮಳೆ ಹಾಗೂ ಮಹಾರಾಷ್ಟ್ರದಿಂದ ಅಧಿಕ ನೀರು ಬಿಡುಗಡೆಯಾದ್ದರಿಂದ ಪ್ರವಾಹಕ್ಕೀಡಾಗಿದ್ದ ಉತ್ತರ ಕರ್ನಾಟಕ ಭಾಗದಲ್ಲಿ ಇದೀಗ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತ ಕುಟುಂಬಗಳು ಸ್ವಯಂ ಪ್ರೇರಣೆಯಿಂದ ಮನೆಗಳಿಗೆ ಹೋಗುವವರಿಗೆ ವಿಶೇಷ ಪಡಿತರ ಕಿಟ್ ವಿತರಣೆ ಮಾಡಲಾಗುತ್ತಿದೆ.

ಪ್ರವಾಹದಿಂದಾಗಿ ನೂರಾರು ಮನೆಗಳಿಗೆ ನೀರು ನುಗ್ಗಿ ಎಲ್ಲವೂ ಸಂಪೂರ್ಣ ಜಲಾವೃತವಾಗಿದ್ದವು. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದ್ದು, ಗಂಜಿ ಕೇಂದ್ರಗಳಲ್ಲಿದ್ದಾರೆ. ಇದೀಗ ನೀರಿನ ಮಟ್ಟ ಕಡಿಮೆಯಾಗಿದ್ದು, ಮನೆಗಳಿಗೆ ವಾಪಸ್ಸು ಹೋಗಲು ಅಣಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಜಿಲ್ಲಾಡಳಿತಗಳು ಅಗತ್ಯ ಸೌಲಭ್ಯ ಕಲ್ಪಿಸುತ್ತಿದೆ.

ಸಂತ್ರಸ್ತ ಕುಟುಂಬಗಳಿಗೆ ಸಿದ್ಧಪಡಿಸಲಾಗಿರುವ ಪ್ರತಿ ರೇಷನ್ ಕಿಟ್ 10 ಕೆ.ಜಿ. ಅಕ್ಕಿ, ಒಂದು ಕೆ.ಜಿ. ತೊಗರಿಬೇಳೆ, 1 ಕೆ.ಜಿ.ಸಕ್ಕರೆ, 1 ಕೆ.ಜಿ. ಅಯೋಡಿನ್‌ಯುಕ್ತ ಉಪ್ಪು, ಒಂದು ಲೀಟರ್ ತಾಳೆಎಣ್ಣೆ ಮತ್ತು 5 ಲೀಟರ್ ಸೀಮೆ ಎಣ್ಣೆ ಒಳಗೊಂಡಿರುತ್ತದೆ. ಪ್ರವಾಹ ಪರಿಸ್ಥಿತಿ ಸುಧಾರಿಸಿರುವ ಗ್ರಾಮದ ಜನರು ತಾವಾಗಿಯೇ ತೆರಳಲು ಮುಂದಾದರೆ ಇದನ್ನು ಕೊಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಮಾನವೀಯತೆ ತೋರಿ: ಕಿಟ್ ವಿತರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸಬೇಕು. ತಾಲೂಕುವಾರು ಕಿಟ್‌ಗಳ ಬೇಡಿಕೆ ಸಂಬಂಧ ಮಾಹಿತಿ ನೀಡಿದರೆ ಜಿಲ್ಲಾಡಳಿತಗಳು ಒದಗಿಸಲಾಗುತ್ತಿವೆ. ಮನೆ ಕುಸಿತ ಹಾಗೂ ಮೂಲಸೌಕರ್ಯಗಳ ಹಾನಿ ಸೇರಿದಂತೆ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಮಾಹಿತಿ ಒದಗಿಸಲು ಸರಕಾರ ನೀಡಿರುವ ನಿಗದಿತ ನಮೂನೆಯನ್ನೇ ಬಳಸಬೇಕು. ಮನೆ ಕುಸಿತದ ಬಗ್ಗೆ ವರದಿ ನೀಡುವಾಗ ಮಾನವೀಯತೆ ತೋರಬೇಕು ಎಂದು ಮನವಿ ಮಾಡಲಾಗುತ್ತಿದೆ.

ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳವರು ಲಭ್ಯ ಅನುದಾನ ಬಳಸಿಕೊಂಡು ಕೂಡಲೇ ಸ್ವಚ್ಛತೆ ಕೈಗೊಳ್ಳಬೇಕು. ಸಂಘ-ಸಂಸ್ಥೆಗಳ ಸಹಯೋಗ ಪಡೆಯಬೇಕು. ಅನೇಕ ದಿನಗಳ ಕಾಲ ನೀರು ನಿಂತಿದ್ದರಿಂದ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಆದುದರಿಂದ ಜನರು ಗ್ರಾಮಗಳಿಗೆ ಹಿಂದಿರುಗುವ ಮುಂಚೆ ಸ್ವಚ್ಛತಾ ಕೆಲಸ ನಡೆಸಬೇಕು ಎಂದು ಸೂಚನೆಗಳು ನೀಡಲಾಗುತ್ತಿದೆ.

ಪ್ರವಾಹ ಸಂಬಂಧಿಸಿದ ಕೆಲಸಗಳಲ್ಲಿ ನಿರ್ಲಕ್ಷ ತೋರುವ ಹಾಗೂ ನೋಡಲ್ ಅಧಿಕಾರಿಗಳಿಗೆ ಸಹಕರಿಸದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರು ಕಡ್ಡಾಯವಾಗಿ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಬೇಕು. ತಹಶೀಲ್ದಾರರ ಕೋರಿಕೆ ಮೇರೆಗೆ ಪರಿಹಾರ ನೀಡಲು ಈಗಾಗಲೇ ಅನುದಾನ ಕೊಡಲಾಗಿದೆ. ಇನ್ನೂ ಅಗತ್ಯವಿದ್ದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News