ಸಚಿವ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನವಿಲ್ಲ: ಎಂ.ಪಿ.ರೇಣುಕಾಚಾರ್ಯ

Update: 2019-08-20 13:03 GMT

ಬೆಂಗಳೂರು, ಆ.20: ಸಚಿವ ಸ್ಥಾನ ದೊರೆಯದಿದ್ದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. ಸಚಿವ ಸ್ಥಾನಕ್ಕೆ ಒತ್ತಾಯಿಸಿ ಯಾರೂ ಪ್ರತಿಭಟನೆ ಮಾಡಬಾರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಚಂದ್ರ ಜಾರಕಿಹೊಳಿ, ಮಾಡಾಳ್ ವಿರೂಪಾಕ್ಷಪ್ಪ ನಾವೆಲ್ಲ ಹಳೆ ಸ್ನೇಹಿತರು ಒಂದು ಕಡೆ ಸೇರಿ ಊಟ ಮಾಡಿದ್ದಕ್ಕೆ ಮಾಧ್ಯಮಗಳು ಅಪಾರ್ಥ ಕಲ್ಪಿಸಿರುವುದು ಸರಿಯಲ್ಲ ಎಂದರು.

ನಾನು ರಾಮನ ಭಂಟನ ಹಾಗೆ ಯಡಿಯೂರಪ್ಪ ಜೊತೆ ಇದ್ದೇನೆ. ನಮ್ಮ ಯಾವ ಶಾಸಕರಿಗೂ ಅಸಮಾಧಾನವಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇನೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಹೇಳಿದರು.

ನಾನು ಪ್ರವಾಹ ಭಾದಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದಲ್ಲಿ ತೊಡಿಗಿದ್ದ ಕಾರಣ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರುವುದು ತಡವಾಯಿತು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ಹಲವು ದೇವರಿಗೆ ಹರಕೆ ಹೊತ್ತಿದ್ದವರು ನಾವು. ಅವರ ಜೊತೆ ಯಾವಾಗಲೂ ಇರುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News