ಅರಸು ಹಿಂದುಳಿದ ವರ್ಗಗಳ ದಾರಿದೀಪ: ಸಾಹಿತಿ ಬರಗೂರು ರಾಮಚಂದ್ರಪ್ಪ

Update: 2019-08-20 13:52 GMT

ತುಮಕೂರು,ಆ.20: ಭೂ ಸುಧಾರಣೆ ಕಾಯಿದೆ ಜಾರಿಗೆ ತರುವ ಮೂಲಕ ಹಿಂದುಳಿದ ವರ್ಗದ ಜನರಿಗೆ ದಾರಿದೀಪವಾದ ದಿ.ದೇವರಾಜ ಅರಸು ಅವರ ಸಾಧನೆ ಅಪಾರವಾದುದು ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶ ಹಾಗೂ ಡಿ. ದೇವರಾಜ ಅರಸು ಅಧ್ಯಯನ ಪೀಠದ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದವರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಶ್ರಮಿಸಿದವರು ಎಂದು ತಿಳಿಸಿದರು.

ಜನಪ್ರಿಯ ಯೋಜನೆಗಳನ್ನು ಜನಪರ ಯೋಜನೆಗಳನ್ನಾಗಿ ಅನುಷ್ಠಾನಗೊಳಿಸುವಂತೆ ಮಾಡಿದ ಕೀರ್ತಿ ಅರಸು ಅವರದ್ದು, ಸಾಮಾಜಿಕ ಸಂಬಂಧವನ್ನು ಬೆಳೆಸುವುದರಲ್ಲಿ ದಿಮಂತ ನಾಯಕರಾಗಿದ್ದವರು. ಇವರ ಮಾನವೀಯ ಗುಣ, ಪರಿವರ್ತನೆಯ ಪ್ರಜ್ಞೆ, ಕಾರ್ಯವೈಖರಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ತಿಳಿಸಿದರು.

ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಿ ಸಹಾಯಧನ ನೆರವು ನೀಡಿದರಲ್ಲದೇ ಸಾಮಾನ್ಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರ ಅರಸು, ಇವರು ಉಳುವವನಿಗೆ ಭೂಮಿ ಯೋಜನೆ ಜಾರಿಗೊಳಿಸಿ ಪ್ರತಿಯೊಬ್ಬ ರೈತರು ಇಂದು ಸ್ವತಂತ್ರವಾಗಿ ದುಡಿಮೆ ಮಾಡುವಂತೆ ಮಾಡಿದ ಧೀಮಂತ ನಾಯಕ, ಜಗತ್ತಿನಲ್ಲಿಯೇ ಮೊದಲ ಬಾರಿಗೆ ವೃಕ್ಷಾ ಸಂರಕ್ಷಣಾ ಕಾಯ್ದೆಯನ್ನು ಜಾರಿಗಳಿಸಿದ ಏಕೈಕ ನಾಯಕ ದೇವರಾಜ ಅರಸು. ಇವರ ಆಡಳಿತವಾಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಬಡ ಜನರಿಗಾಗಿ ಶ್ರಮಿಸಿದವರು. ರಾಜಕಾರಣಿಗಳಾದರು ಓದಿನ ಮೇಲೆ ಅಪಾರ ಆಸಕ್ತಿ ಹೊಂದಿದವರು  ಎಂದು ತಿಳಿಸಿದರು. 

ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್ ಜಯರಾಮರಾಜೇ ಅರಸ್ ಮಾತನಾಡಿ, ಡಿ.ದೇವರಾಜ ಅರಸು ಅವರು ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಅವರ ಗೇಣಿ ಶಾಸನ, ಹಾವನೂರು ಆಯೋಗದಂತಹ ನಿರ್ಧಾರಗಳನ್ನು ತೆಗೆದುಕೊಂಡು ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದವರು ಅರಸು ಅವರು ತಮ್ಮ ನಿರ್ಧಾರದ ದೂರದೃಷ್ಠಿಯಿಂದ ಮುಂದಿನ ಪೀಳಿಗೆಯ ಬದುಕಿನ ಯೋಜನೆಗಳನ್ನು ರೂಪಿಸಿದವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್ ಸಿದ್ದೇಗೌಡ, ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಗುರುಲಿಂಗಯ್ಯ ಎಂ, ಡಿ ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಹಿಂದುಳಿದ ವರ್ಗಗಳ ಕೋಶದ ಸಂಯೋಜಕ ವೆಂಕಟರೆಡ್ಡಿ ರಾಮರೆಡ್ಡಿ, ಪತ್ರಿಕೋದ್ಯಮ ವಿಭಾಗದ ಪದ್ಮನಾಭ ಕೆ.ವಿ ಸೇರಿದಂತೆ  ಮತ್ತಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News