'ಬಾಂಬೆ ಬ್ಲೂ ಬಾಯ್ಸ್' ಸಂತೋಷವಾಗಿರಲಿ: ಡಿ.ಕೆ.ಶಿವಕುಮಾರ್ ಲೇವಡಿ
ಹೊಸದಿಲ್ಲಿ, ಆ. 22: ಬಸವಣ್ಣನವರ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅನರ್ಹ ಶಾಸಕರು ದೊಡ್ಡ ತ್ಯಾಗಿಗಳ ರೀತಿ ಕಾಣುತ್ತಿದ್ದು, ‘ಬಾಂಬೆ ಬ್ಲೂ ಬಾಯ್ಸ್’ ಸಂತೋಷವಾಗಿರಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಗುರುವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಲವತ್ತು ವರ್ಷ ಕಟ್ಟಿಬೆಳೆಸಿದ ಪಕ್ಷವನ್ನು ಬೀಳಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿರುವ ಕಾಂಗ್ರೆಸ್ನ ಅನರ್ಹ ಶಾಸಕರಿಗೆ ಇದೀಗ ಬಹಳ ಸಂತೋಷ ಆಗಿದೆ ಎಂದು ಟೀಕಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ನಾಯಕ. ಅವರ ಜನ್ಮ ದಿನಾಚರಣೆ ಮಾಡಲು ದಿಲ್ಲಿಗೆ ಬಂದಿದ್ದೇನೆ. ನಾಳೆ ಮಧ್ಯಪ್ರದೇಶಕ್ಕೆ ತೆರಳಲಿದ್ದು, ಅನಂತರ ಬೆಂಗಳೂರಿಗೆ ಹಿಂದಿರುಗುತ್ತೇನೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆ ನೀಡುವುದಿಲ್ಲ: ಬಿಜೆಪಿ ಶಾಸಕ ಉಮೇಶ್ ಕತ್ತಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವರು ಬಹಿರಂಗವಾಗಿ, ಮತ್ತೆ ಕೆಲವರು ಗೌಪ್ಯವಾಗಿ ಭೇಟಿಯಾಗುತ್ತಾರೆ. ಹೀಗಾಗಿ ಅವರ ಭೇಟಿಯ ಬಗ್ಗೆ ನಾನೇನು ಹೇಳುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಸಂಬಂಧ ನಾನು ಯಾರನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ನಾನು ಮಾತನಾಡಿಲ್ಲ. ಬೆಂಗಳೂರಿಗೆ ಹೋದ ಬಳಿಕ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.