ಚರಿತ್ರೆಯ ಬೆಳಕಿನಲ್ಲಿ ರಾಮಕೃಷ್ಣರ ವರ್ತಮಾನ....

Update: 2019-08-22 18:33 GMT

 ಮನುಸ್ಮತಿ, ಭಗವದ್ಗೀತೆ, ರಾಷ್ಟ್ರೀಯತೆ, ಸಂಸ್ಕೃತಿ....ಮುಂತಾದ ವಿಷಯಗಳು ಇವತ್ತಿನ ಬಹು ಚರ್ಚಿತ ವಿಷಯಗಳು. ಇವುಗಳ ಬಗ್ಗೆ ಅತ್ಯಂತ ತೀಕ್ಷ್ಣವಾಗಿ ಪರ-ವಿರೋಧಗಳು, ತಪ್ಪು ವ್ಯಾಖ್ಯಾನಗಳು ಹಾಗೂ ವೈಭವೀಕರಣ ಪ್ರವೃತ್ತಿಗಳು ಹೊರ ಬರುತ್ತಿವೆ. ನಾಡಿನ ಕೆಲವೇ ಕೆಲವು ವಿದ್ವಾಂಸರು ಈ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ವಿಚಾರ ಮಂಡಿಸುತ್ತಿದ್ದಾರೆ. ಅಂತಹ ಹಿರಿಯ ವಿಚಾರವಾದಿ ವಿದ್ವಾಂಸರಲ್ಲಿ ಜಿ. ರಾಮಕೃಷ್ಣರು ಒಬ್ಬರು. ಅವರು ಬರೆದಿರುವ ‘ವರ್ತಮಾನ’ ಪುಟ್ಟ ಕೃತಿ ಅಂತಹ ಮಂಡನೆಗಳ ಸಾಲಿಗೆ ಸೇರುತ್ತದೆ. ಚರಿತ್ರೆಯ ಬೆಳಕಿನಲ್ಲಿ ಅವರು ವರ್ತಮಾನದ ಹೆಜ್ಜೆಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೃತಿಯಲ್ಲಿ ಎರಡು ಅಧ್ಯಾಯಗಳು ರಾಷ್ಟ್ರೀಯತೆಯ ವ್ಯಾಖ್ಯಾನಗಳಿಗೆ ಸೀಮಿತವಾಗಿವೆ. ಹಾಗೆಯೇ ಕೌಟಿಲ್ಯನ ಅರ್ಥಶಾಸ್ತ್ರದ ಕುರಿತಂತೆ ಒಂದು ಟಿಪ್ಪಣಿಯಿದೆ. ಜತೆಗೆ ಆರು ಅಧ್ಯಾಯಗಳಲ್ಲಿ ಮನುಸ್ಮತಿಯ ವಿಸ್ತೃತ ಪರಿಚಯವನ್ನು ಮಾಡುತ್ತಾರೆ.

‘‘....ಯಾವ ಸಮಾಜವೂ ಸ್ಥಗಿತವಲ್ಲ. ನಮ್ಮ ದೇಶದ ಸಮಾಜದ ಇತಿಹಾಸವು ಅದಕ್ಕೊಂದು ದೃಷ್ಟಾಂತ. ಸಿಂಧೂ ಕಣಿವೆಯ ನಾಗರಿಕತೆ, ಋಗ್ವೇದ ಕಾಲೀನ ವೈಭವ, ಆನಂತರದಲ್ಲಿ ಉಗಮಗೊಂಡ ವಿಭಜಿತ ಸಮಾಜ, ಆಮೇಲಿನ ಸಾಮಾಜಿಕ ತುಮುಲಗಳು, ಎಲ್ಲಾ ಎಷ್ಟು ಭಿನ್ನವಾಗಿವೆ ಎಂಬುದು ಚಿರಪರಿಚಿತ. ಸಮಾನತೆಯಿಂದ ಅಸಮಾನತೆಯೆಡೆಗೆ ವಿಕಸಿಸಿದ ನಮ್ಮ ಸಮಾಜದಲ್ಲಿ ನಾವಿಂದು ಪ್ರತ್ಯಕ್ಷವಾಗಿ ಕಾಣುವ ಲಕ್ಷಣಗಳು ಎಷ್ಟೇ ವಿಧಗಳಲ್ಲಿ ಪ್ರತಿಫಲನಗೊಂಡಿವೆ. ಎಲ್ಲವೂ ರಮ್ಯವಾಗಿರಲಿಲ್ಲ. ಅಸಹ್ಯವೂ ಆಗಿರಲಿಲ್ಲ. ನಿಜಕ್ಕೂ ನಮ್ಮ ಪ್ರಾಚೀನ ಸಮಾಜ ಏನಾಗಿದ್ದಿತೆಂಬ ಕುತೂಹಲವನ್ನು ವಸ್ತುನಿಷ್ಠವಾಗಿ ತಣಿಸುವ ಬದಲು ಸಬೂಬುಗಳನ್ನು ಕಂಡುಕೊಳ್ಳುವುದು ಇಲ್ಲವೇ ರಮ್ಯತೆಯನ್ನು ಆರೋಪಿಸುವುದು ಉಪಹಾಸಕ್ಕೆ ಕಾರಣವಾಗಿದೆ. ಅದರ ಜಾಗದಲ್ಲಿ ನೈಜ ಇತಿಹಾಸವನ್ನು ನಾವು ಗುರುತಿಸಿ ಮುಂದುವರಿಯಬೇಕು. ಎಲ್ಲವೂ ಶ್ರೇಷ್ಠವಾಗಿದ್ದಿದ್ದರೆ ಪತನವೇಕಾಗಬೇಕಾಗಿತ್ತು? ಸಂಘರ್ಷವೇಕೆ ಬೇಕಾಗುತ್ತಿತ್ತು? ನಾಗರಿಕತೆಯಲ್ಲಿ ನಾವೆಷ್ಟು ದೂರ ನಡೆದು ಬಿಟ್ಟಿದ್ದೇವೆಂದರೆ ಎಲ್ಲವೂ ಹಿಂದಿನಂತಿರಬೇಕು ಎಂದು ಆಗ್ರಹಿಸುವವರು ಸಹ ಅದನ್ನು ಗಂಭೀರವಾಗಿ ಪರಿಗಣಿಸಲಾರರು. ಇಂದಿನ ವೌಲ್ಯಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಹಂತದಲ್ಲಿ, ವೌಲ್ಯಗಳು ಕ್ರಮಿಸಿದ ಹಾದಿಯನ್ನು ತಿಳಿಯುವುದು ಅಗತ್ಯ. ಅದಕ್ಕೆ ಕಲ್ಪನಾಲೋಕದ ವಿಹಾರ ಬೇಡ, ಇತಿಹಾಸದ ದಾಖಲೆಗಳು ಬೇಕು...’’ ಎಂದು ರಾಮಕೃಷ್ಣ ಅವರು ಅಭಿಪ್ರಾಯ ಪಡುತ್ತಾರೆ. ಮತ್ತು ಅದರ ಫಲವೇ ಈ ಅಧ್ಯಯನ ಕೃತಿ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 104. ಮುಖಬೆಲೆ 100 ರೂ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News