ಸಾಲ ಬಾಧೆ: ರೈತ ಆತ್ಮಹತ್ಯೆಗೆ ಶರಣು
Update: 2019-08-23 17:47 GMT
ಶಿವಮೊಗ್ಗ, ಆ. 23: ಸಾಲ ಬಾಧೆಯಿಂದ ಬೇಸತ್ತು ರೈತರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಜಾವಳ್ಳಿ ಗ್ರಾಮದಲ್ಲಿ ನಡೆದಿದೆ.
ಬೂದ್ಯಪ್ಪ (60) ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ಇವರು ಬೆಳೆ ಸಂಬಂಧ ಹಾಗೂ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಲು ಬ್ಯಾಂಕ್ ಹಾಗೂ ಖಾಸಗಿಯಾಗಿ 3.90 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಬೋರ್ವೆಲ್ನಲ್ಲಿ ನೀರು ಲಭ್ಯವಾಗಿರಲಿಲ್ಲ. ಹಾಗೆಯೇ ಸಾಲ ಮರು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ.
ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅವರು ಇತ್ತೀಚೆಗೆ ಮನೆಯಿಂದ ಹೊರ ಹೋದವರು ಹಿಂದಿರುಗಿರಲಿಲ್ಲ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿರಲಿಲ್ಲ.
ಕುಟುಂಬದವರು ಶೋಧ ನಡೆಸಿದ ವೇಳೆ ಜಮೀನಿನ ಗಿಡಗಂಟೆಗಳ ಪೊದೆಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.