ಬಿಸಿಯೂಟ ತಡವಾಗಿ ಮಾಡಿದಕ್ಕೆ ಸಿಬ್ಬಂದಿಗೆ ಎಸ್‌ಡಿಎಂಸಿ ಅಧ್ಯಕ್ಷ ಮಾರಣಾಂತಿಕ ಹಲ್ಲೆ: ಆರೋಪ

Update: 2019-08-25 15:07 GMT

ಯಾದಗಿರಿ, ಆ.25: ಮಧ್ಯಾಹ್ನದ ಬಿಸಿಯೂಟದ ತಡವಾಗಿ ಮಾಡಿದಕ್ಕೆ ಸಿಬ್ಬಂದಿ ಮೇಲೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗುಂಡಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆ ಶನಿವಾರ ಗುಂಡಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಎಸ್‌ಡಿಎಂಸಿ ಅಧ್ಯಕ್ಷ ಭೀಮಣ್ಣ ಈ ಕೃತ್ಯವೆಸೆಗಿದ್ದಾನೆ ಎಂದು ಹೇಳಲಾಗುತ್ತಿದೆ.

ಶನಿವಾರ ಮಧ್ಯಾಹ್ನ ಅಡುಗೆ ಮಾಡುವುದು ತಡವಾಗಿತ್ತು. ಈ ಕಾರಣದಿಂದ ಬಿಸಿಯೂಟ ಮಾಡುವ ಸಿಬ್ಬಂದಿ ಮತ್ತು ಎಸ್‌ಡಿಎಂಸಿ ಸದಸ್ಯರ ಮಧ್ಯೆ ಗಲಾಟೆಯಾಗಿತ್ತು. ಈ ವಿಚಾರವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಭೀಮಣ್ಣ ತಡರಾತ್ರಿ ಗುಂಪು ಕಟ್ಟಿಕೊಂಡು ಅಡುಗೆ ಮಾಡುವ ಕಮಲಬಾಯಿ ಮನೆಗೆ ತೆರಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಮಲಬಾಯಿ ಹಾಗೂ ಕುಟುಂಬಸ್ಥರ ಮೇಲೆ ಭೀಮಣ್ಣ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಘಟನೆಯಲ್ಲಿ ಕಮಲಬಾಯಿ ಪತಿಗೆ ಗಂಭೀರ ಗಾಯವಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News