ಸಚಿವರಿಗೆ ಖಾತೆಗಳ ಹಂಚಿಕೆ: ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ವ್ಯಂಗ್ಯ

Update: 2019-08-27 12:33 GMT

ಬೆಂಗಳೂರು, ಆ.27: ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಿದ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅಸಮಾಧಾನಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಟ್ವೀಟರ್‌ನಲ್ಲಿ ವ್ಯಂಗ್ಯವಾಡಿವೆ.

ಉಪ ಮುಖ್ಯಮಂತ್ರಿ ಸ್ಥಾನ ದೊರಕಿಲ್ಲವೆಂದು ಬಹಳಷ್ಟು ಬಿಜೆಪಿ ನಾಯಕರಿಗೆ ಅಸಮಾಧಾನ. ಸರಿಯಾದ ಖಾತೆ ಹಂಚಿಕೆ ಆಗಿಲ್ಲವೆಂದು ಹಲವು ಮಂತ್ರಿಗಳಿಗೆ ಅಸಮಾಧಾನ. ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಂಡಿಲ್ಲವೆಂದು ಹಲವು ಶಾಸಕರಿಗೆ ಅಸಮಾಧಾನ. ಆರೆಸೆಸ್ಸ್ ಮತ್ತು ಬಿಜೆಪಿ ಅಸಮಾಧಾನಿತರು ಸೇರಿ ರಚಿಸಿದ್ದಾರೆ ‘ಅತೃಪ್ತ ಹಾಗೂ ಅನರ್ಹ ಸರಕಾರ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಸರಿಯಾದ ಖಾತೆ ಸಿಕ್ಕಿಲ್ಲವೆಂದು, ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಅತೃಪ್ತಿಯನ್ನು ಅಸಮಾಧಾನವನ್ನು ಸಿಟ್ಟನ್ನು ತೋರಿಸುತ್ತಿರುವ ಬಿಜೆಪಿ ಶಾಸಕರು, ನೆರೆ ಸಂಕಷ್ಟದಲ್ಲಿ ಸಿಲುಕಿರುವ ಜನತೆಯ ಪರವಾಗಿ ಕಾಳಜಿಯನ್ನು ತೋರಲಿಲ್ಲ. ಪರಿಹಾರ ಕಾರ್ಯದಲ್ಲಿ ತೊಡಗಲಿಲ್ಲ. ಕೇಂದ್ರದಿಂದ ಮಧ್ಯಂತರ ಆರ್ಥಿಕ ನೆರವನ್ನು ಪಡೆಯಲು ಪ್ರಯತ್ನಿಸಲೂ ಇಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾರ್ಯಾರಂಭಕ್ಕೆ ಮುನ್ನವೇ ಮುಗ್ಗರಿಸಿರುವ ಈ ಅಪವಿತ್ರ ಸರಕಾರವು ಸಂಪುಟ ರಚನೆಯಲ್ಲಿ ಪ್ರಾದೇಶಿಕ, ಅಸಮತೋಲನೆಯಿಂದ ಕೂಡಿದ್ದು, ಸಾಮಾಜಿಕ ನ್ಯಾಯವನ್ನು ಕೂಡ ಪಾಲಿಸಲಾಗಿಲ್ಲ. ಹಲವು ಗುಂಪುಗಾರಿಕೆಗಳ ಭಿನ್ನಮತಗಳ ಸರಕಾರ ಇದಾಗಿದ್ದು, ನಿರ್ದಿಷ್ಟವಾಗಿ ಭ್ರಷ್ಟಾಚಾರವಲ್ಲದೆ, ರಾಜ್ಯದ ಅಭಿವೃದ್ಧಿ ಮಾಡಲು ಇವರಿಂದ ಸಾಧ್ಯವಿಲ್ಲವೆಂದು ಕಾಣುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

ಮೀಸೆ ಮಣ್ಣಾಗಿಸಿಕೊಂಡು ಸೋತವರು ನಗುನಗುತ ಬೀಗುತಿಹರು, ಎದೆಯೊಡ್ಡಿ ಜಯಿಸಿದವರು ತಲೆ ತಗ್ಗಿಸಿ ಕೈ ಚಾಚುತಿಹರು. ಹಾರುತಿಹ ನ್ಯಾಯ ಧ್ವಜವನ್ ಇಳಿಸಿ ಮುನ್ನಡೆಯಲು, ಎಲ್ಲಿಹುದು ನ್ಯಾಯ ಮರ್ಯಾದಾ ಪುರುಷೋತ್ತಮನ ಆಳ್ವಿಕೆಯೋಳ್? ಎಂದು ಜೆಡಿಎಸ್ ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News