ಬಿಎಸ್ವೈ ಸರಕಾರ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲಿ: ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ
Update: 2019-08-28 11:57 GMT
ಬೆಂಗಳೂರು, ಆ.28: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಅತಿವೃಷ್ಟಿಗೆ ತುತ್ತಾಗಿರುವ ಸಂತ್ರಸ್ತರ ನೆರವಿಗೆ ಧಾವಿಸುವ ಕೆಲಸ ಮಾಡಲಿ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.
ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವ ಸ್ಥಿತಿಯಲ್ಲಿರದೆ ಕೇವಲ ತನ್ನ ಸ್ಥಾನ ಗಟ್ಟಿಗೊಳಿಸುವ ಹಾಗೂ ಅತೃಪ್ತರನ್ನು ಎದುರಿಸುವ ಕಸರತ್ತಿನಲ್ಲೇ ತಲ್ಲೀನರಾಗಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ ಬಂದ ಭಾರೀ ಪ್ರವಾಹದಿಂದ ಆಸ್ತಿ-ಪಾಸ್ತಿ, ಜನ-ಜಾನುವಾರು ನಷ್ಟವಾಗಿದೆ. ಆದರೆ, ಸರಕಾರ ಇನ್ನೂ ಸೂಕ್ತ ಪರಿಹಾರ ಒದಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಯಡಿಯೂರಪ್ಪ ಸರಕಾರದಲ್ಲಿ ಮೂವರು ಉಪ ಮುಖ್ಯಮಂತ್ರಿಗಳ ನೇಮಕದ ಹಿಂದೆ ರಾಜ್ಯದ ಹಿತಾಸಕ್ತಿ ಇಲ್ಲ. ಹಾಗಾಗಿ, ರಾಜ್ಯಕ್ಕೆ ಉತ್ತಮ ಸರಕಾರ ನೀಡುವ ಸಲುವಾಗಿ ಈಗಿನ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆ ಘೋಷಿಸುವುದು ಉತ್ತಮ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.