ಅಕ್ರಮ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸೂಚನೆ

Update: 2019-09-05 16:48 GMT

ಬೆಂಗಳೂರು , ಸೆ.5: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಂಪ್ ಸೆಟ್ ಗಳಿಗೆ ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಸಂಪರ್ಕಗಳನ್ನು ಇನ್ನು ಎರಡು ದಿನಗಳ ಒಳಗೆ ಸ್ಥಗಿತಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.  

ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ರಾಯಚೂರು ಜಿಲ್ಲೆಯ ರಾಯಚೂರು ಮತ್ತು ಮಾನ್ವಿ ತಾಲೂಕಿಗಳಿಗೆ ನೀರಿನ ಸೌಲಭ್ಯ ಒದಗಿಸುವ ಕುರಿತಂತೆ ರೈತರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಇಂದು ಮನವಿ ಸಲ್ಲಿಸಿತು.  

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಅಗತ್ಯವಿದ್ದಲ್ಲಿ ಪೊಲೀಸ್ ರಕ್ಷಣೆಯನ್ನು ಪಡೆದು ರೈತರಿಗೆ ನ್ಯಾಯಯುತವಾಗಿ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಾನ್ವಿ ಮತ್ತು ರಾಯಚೂರು ತಾಲೂಕಿನ 2.40 ಲಕ್ಷ ಎಕರೆಗೆ ನೀರಿನ ಕೊರತೆ ನೀಗಿಸಲು ತಕ್ಷಣ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ನೀರು ನಿರ್ವಹಣೆ ಮಾಡಲು 80 ಇಂಜಿನಿಯರ್ ಗಳ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಹಾಗೂ ರೈತರು ಮಾಡಿದ ಇತರ ಮನವಿಗಳ ಬಗ್ಗೆ ಪರಿಶೀಲಿಸಿ  ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು  ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ರಾಜ ಅಮರೇಶ್ ನಾಯಕ್, ಶಾಸಕರಾದ ಶಿವನಗೌಡ ನಾಯಕ್, ಶಿವರಾಜ್ ಪಾಟೀಲ್, ವೆಂಕಟಪ್ಪ ನಾಯಕ್, ಬಸವನಗೌಡ ದದ್ದಲ್ ಹಾಗೂ ನಾಡಗೌಡ ಪ್ರತಾಪ್ ಗೌಡ ಪಾಟೀಲ್ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News