ಡಿ.ಕೆ.ಶಿವಕುಮಾರ್ ನನ್ನ ಗೆಳೆಯ, ದಿಲ್ಲಿಯಲ್ಲಿ ಭೇಟಿ ಮಾಡುವೆ: ರಮೇಶ್ ಜಾರಕಿಹೊಳಿ

Update: 2019-09-06 15:01 GMT

ಬೆಳಗಾವಿ, ಸೆ. 6: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ನನ್ನ ಗೆಳೆಯರಾಗಿದ್ದು, ಅವರನ್ನು ನಾನು ಹೊಸದಿಲ್ಲಿಯಲ್ಲಿಯೆ ಭೇಟಿ ಮಾಡುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಿವಕುಮಾರ್ ಅವರು ನನ್ನ ಉತ್ತಮ ಗೆಳೆಯ. ರಾಜಕೀಯ ಹಾಗೂ ವೈಯಕ್ತಿಕ ಜೀವನ ಬೇರೆಯಾಗಿದ್ದು, ಅವರ ಕಷ್ಟ ಕಾಲದಲ್ಲಿ ನಾನು ಅವರೊಂದಿಗೆ ಇರುತ್ತೇನೆ ಎಂದರು.

ಹೊಸದಿಲ್ಲಿಗೆ ಹೋದ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಈ ಹಿಂದೆ ಅವರ ಭೇಟಿಗೆ ತೆರಳಿದ್ದೆ. ಆದರೆ ಭೇಟಿ ಸಾಧ್ಯವಾಗಲಿಲ್ಲ ಎಂದ ಅವರು, ಗೋಕಾಕ್ ಕ್ಷೇತ್ರದಲ್ಲಿ ಏರ್ಪಡಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ ಎಂದರು.

ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ತಲೆ ಸರಿಯಲ್ಲ. ಅವರನ್ನ ಧಾರವಾಡದ ಆಸ್ಪತ್ರೆಗೆ ಸೇರಿಸಬೇಕೆಂದು ಆಕ್ರೋಶ ಹೊರಹಾಕಿದ ರಮೇಶ್ ಜಾರಕಿಹೊಳಿ, ನೆರೆ ಸಂತ್ರಸ್ತರಿಗೆ ನೆರವಿಗೆ ಧಾವಿಸಿದ್ದು, ನಾನು ಈ ವಿಚಾರದಲ್ಲಿ ಪ್ರಚಾರಕ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News