ಇ-ಟೆಂಡರ್ ಪೋರ್ಟಲ್‌ಗೆ ಕನ್ನ ಆರೋಪ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಜೆಡಿಎಸ್ ಆಗ್ರಹ

Update: 2019-09-09 18:31 GMT

ಬೆಂಗಳೂರು, ಸೆ. 9: ಇ-ಟೆಂಡರ್ ಪೋರ್ಟಲ್‌ಗೆ ಕನ್ನ ಹಾಕಿರುವ ನೆಪವೊಡ್ಡಿ ಇ-ಆಡಳಿತ ಇಲಾಖೆಯೆ ಭರ್ಜರಿ ವ್ಯಾಪಾರಕ್ಕೆ ನಿಂತಿರುವುದು ಈ ರಾಜ್ಯದ ದುರಂತ ಮತ್ತು ಇ-ಆಡಳಿತಕ್ಕೆ ಕಪ್ಪುಚುಕ್ಕೆ ಎಂದು ಜೆಡಿಎಸ್ ವಕ್ತಾರ ರಮೇಶ್‌ ಬಾಬು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪಾರದರ್ಶಕ ಟೆಂಡರ್ ನಡೆಸುವ ಕಾರಣಕ್ಕಾಗಿ ಇ-ಟೆಂಡರ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಇದರಿಂದ ಸರಕಾರಿ ಇಲಾಖೆಯಲ್ಲಿ ಟೆಂಡರ್ ವ್ಯವಸ್ಥೆಯಲ್ಲಿ ಪ್ರಭಾವ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಿಳಂಬ, ಅಕ್ರಮ ದಂಧೆ ನಿಲ್ಲಿಸುವ ಮೂಲ ಉದ್ದೇಶ ಹೊಂದಲಾಗಿತ್ತು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 1 ತಿಂಗಳಲ್ಲಿ ಪೋರ್ಟಲ್‌ಗೆ ಕನ್ನ ಹಾಕಿರುವ ಸುದ್ದಿ ಹರಡಲಾಯಿತು. ಇದು ನಿಜವಾಗಿದ್ದರೆ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಲು ಏನು ತೊಂದರೆ ಇತ್ತು ? ಕನ್ನ ಹಾಕಿದ್ದರೆ ಯಾರು ಮತ್ತು ಏಕೆ ಎಂದು ಸರಕಾರ ಸಾರ್ವಜನಿಕವಾಗಿ ಉತ್ತರಿಸಬೇಕಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇಲಾಖೆ ಸಿಬ್ಬಂದಿ ಪೋರ್ಟಲ್ಗೆ ಕನ್ನ ಹಾಕಿರುವ ನಾಟಕದಲ್ಲಿ ಮತ್ತು ಮೋಸದಲ್ಲಿ ಶಾಮಿಲಾಗಿದ್ದಾರೆ. ಇ-ಟೆಂಡರ್‌ನಲ್ಲಿ ಖದೀಮರಿಗೆ ಅನುಕೂಲ ಮಾಡಲು ಮತ್ತು ಇ-ಟೆಂಡರ್ ಹಣವನ್ನು ಬಿಡ್‌ದಾರರಿಗೆ ವಾಪಸ್ಸು ನೀಡಲು ದಂಧೆ ಪ್ರಾರಂಭಿಸಿದ್ದಾರೆ. ಸರಕಾರ ಎಲ್ಲ ಅವ್ಯವಹಾರ ತನಿಖೆಗೆ ಆದೇಶ ನೀಡಿದರೆ ಸತ್ಯ ಆಚೆಗೆ ಬರಲಿದೆ. ಜನರು ಇ-ಪೋರ್ಟಲ್ ಕನ್ನ ಆರೋಪದಲ್ಲಿ ರಾಜ್ಯ ಸರಕಾರದ ತಟಸ್ಥ ನೀತಿಯನ್ನು ಅನುಮಾನದಿಂದ ನೋಡುತ್ತಿದ್ದಾರೆ. ರಾಜ್ಯದ ಇ-ಆಡಳಿತದಲ್ಲಿ ಮೊದಲ ಬಾರಿಗೆ ಟೆಂಡರ್ ಪೋರ್ಟಲ್ ಕನ್ನ ಆರೋಪ ಕೇಳಿಬಂದಿದೆ.

ಸರಕಾರ ಇದುವರೆಗೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾವ ಅಧಿಕಾರಿಯ ಮೇಲೂ ಕ್ರಮ ತೆಗೆದುಕೊಂಡಿಲ್ಲ. ಇದು ಬಹಳಷ್ಟು ಅನುಮಾನಗಳಿಗೆ ಅವಕಾಶ ನೀಡಿದೆ. ಪೋರ್ಟಲ್‌ಗೆ ಕನ್ನ ಹಾಕಿದ್ದರೆ ಈಗಲೂ ಇ ಟೆಂಡರ್ ಮಾಡಲು ಹೇಗೆ ಸಾಧ್ಯ? ತಮಗೆ ಬೇಕಾದ ಇ-ಟೆಂಡರ್ ಈಗಲೂ ನಡೆಯುತ್ತಿದೆ. ಕಮೀಷನ್ ನೀಡಿದವರಿಗೆ ಇಎಂಡಿ ಹಣ ವಾಪಸ್ಸು ನೀಡಲಾಗುತ್ತಿದೆ. ಇದರಿಂದ ಕೆಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿರುವುದು ಕಂಡುಬರುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು ತನಿಖೆಗೆ ಆದೇಶ ನೀಡಬೇಕು. ಇ- ಟೆಂಡರ್‌ನಲ್ಲಿ ಇಎಂಡಿ ಪಾವತಿಸಿ ತಿಂಗಳಾದರೂ ವಾಪಸ್ಸು ನೀಡದ ಗುತ್ತಿಗೆದಾರರಿಗೆ ಮಾಸಿಕ ಶೇ.2ರ ಬಡ್ಡಿ ನೀಡಿ ವಾಪಸ್ಸು ಮಾಡಬೇಕು. ಈ ನಷ್ಟವನ್ನು ಸಂಬಂಧಪಟ್ಟ ಇಲಾಖಾ ನೌಕರರಿಂದ ವಸೂಲು ಮಾಡಬೇಕೆಂದು ರಮೇಶ್ ಬಾಬು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News